ಕಾರವಾರ (ಉ.ಕ): ಯಕ್ಷಗಾನದ ಮೇರುನಟ ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಸ್ಥಾಪಿತವಾದ ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ ಖ್ಯಾತ ರಂಗಭೂಮಿ ಕಲಾವಿದೆ, ನಿರ್ದೇಶಕಿ ಹಾಗೂ ರಾಜ್ಯಸಭಾ ಮಾಜಿ ಸದಸ್ಯೆಯೂ ಆಗಿರುವ ಪದ್ಮಶ್ರೀ ಡಾ.ಬಿ ಜಯಶ್ರೀ ಅವರಿಗೆ ಘೋಷಣೆಯಾಗಿದೆ.
ಯಕ್ಷಗಾನದ ಸರ್ವ ಸಮರ್ಥ ಕಲಾವಿದ ಕೆರೆಮನೆ ಗಜಾನನ ಹೆಗಡೆ ಹೆಸರಿನಲ್ಲಿ ಸ್ಥಾಪಿತವಾದ ‘ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ಗೆ ಯಕ್ಷಗಾನದ ಹಿರಿಯ ಭಾಗವತ ಸುಬ್ರಾಯ ಭಾಗವತ ಕಪ್ಪೆಕೆರೆ ಅವರನ್ನು ಆಯ್ಕೆ ಮಾಡಲಾಗಿದೆ.
![Yakshagana artist Bhagavata Subraya Bhagavatam Kappkekere](https://etvbharatimages.akamaized.net/etvbharat/prod-images/kn-kwr-04-rastriya-prasasti-goshane-ka10044_13032021220849_1303f_1615653529_745.jpg)
ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ನಿರ್ದೇಶಕಿಯಾಗಿ ಮತ್ತು ಪ್ರಸಿದ್ಧ ಗಾಯಕರೂ ಆಗಿ ಕಲೆಗೆ ನೀಡಿರುವ ಅನನ್ಯ ಕೊಡುಗೆಯನ್ನು ಪರಿಗಣಿಸಿ ಮಂಡಳಿ ಹಾಗೂ ನಾಟ್ಯೋತ್ಸವ ಸಲಹಾ ಸಮಿತಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ಜಯಶ್ರೀ ಅವರನ್ನು ಆಯ್ಕೆ ಮಾಡಿದೆ. ‘ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ಯು 25,000 ರೂ. ನಗದು, ಪ್ರಶಸ್ತಿ ಪತ್ರ ಮತ್ತು ಇತರ ಗೌರವಗಳನ್ನು ಒಳಗೊಂಡಿದೆ.
ಮಂಡಳಿಯ ಸರ್ವಸಮರ್ಥ ಯಕ್ಷಗಾನ ಕಲಾವಿದ, ಖ್ಯಾತ ಸ್ತ್ರಿ ವೇಷಧಾರಿಯಾಗಿ ಮಿಂಚಿ ಮರೆಯಾದ, ಕೆರೆಮನೆ ಶಿವರಾಮ ಹೆಗಡೆಯವರ ಕಿರಿಯ ಪುತ್ರ ಕೆರೆಮನೆ ಗಜಾನನ ಹೆಗಡೆ ಇವರ ಹೆಸರಿನಲ್ಲಿ ಕಳೆದ 8 ವರ್ಷದಿಂದ (2012) ಯಕ್ಷಗಾನ ಕ್ಷೇತ್ರಕ್ಕೆ ಮೀಸಲಾದ ಪ್ರಶಸ್ತಿಯನ್ನು ಘೋಷಿಸಲಾಗುತ್ತಿದ್ದು, ಈ ಬಾರಿ ಸುಬ್ರಾಯ ಭಾಗವತ ಅವರಿಗೆ ಘೋಷಣೆಯಾಗಿದೆ. ಈ ಪ್ರಶಸ್ತಿಯು ರೂ.15,000 ನಗದು, ಪ್ರಶಸ್ತಿ ಪತ್ರ, ಇತ್ಯಾದಿ ಗೌರವಗಳನ್ನು ಒಳಗೊಂಡಿದೆ.
ಏಪ್ರಿಲ್ 2 ಮತ್ತು 3ರಂದು ಗುಣವಂತೆ ಯಕ್ಷಾಂಗಣದಲ್ಲಿ ನಡೆಯಲಿರುವ ಎರಡು ದಿನಗಳ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ದ ಸಂದರ್ಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಶಿವಮೊಗ್ಗ ಹಾಗೂ ಕೆರೆಮನೆ ಇಡಗುಂಜಿ ಮೇಳದ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿದ್ದ ಹಣ, ಬಂಗಾರದ ಜೊತೆ ಪತ್ನಿ, ಮಕ್ಕಳು, ಅತ್ತೆ ನಾಪತ್ತೆ : ದೂರು ನೀಡಿದ ಪತಿ