ಕಾರವಾರ: ಇಂದಿನ ರಾಸಾಯನಿಕ ಕೃಷಿಯ ಯುಗದಲ್ಲಿ ತರಕಾರಿಗಳು ರಾಸಾಯನಿಕಯುಕ್ತವಾಗಿ ಅನಾರೋಗ್ಯಕರ ಪರಿಸ್ಥಿತಿಯನ್ನು ಸೃಷ್ಟಿಸಿವೆ. ಈ ನಡುವೆ ಅಲ್ಲಲ್ಲಿ ಆರೋಗ್ಯಕರ ಸಾವಯವ ಕೃಷಿಕರು ಕಂಡುಬರುತ್ತಾರೆ. ಸಾವಯವ ತರಕಾರಿ ಬೆಳೆದು ಪ್ರತಿ ಬಾರಿ ಗೌರಿ-ಗಣೇಶ ಹಬ್ಬದ ವೇಳೆಗೆ ಹೊರರಾಜ್ಯಗಳಿಗೆ ಕೊಂಡೊಯ್ದು, ಭರ್ಜರಿ ವ್ಯಾಪಾರ ಮಾಡುತ್ತಿದ್ದ ರೈತರಿಗೆ ಈ ಬಾರಿ ಕೊರೊನಾ ಅಡ್ಡಿಯಾಗಿದೆ.
ಕಾರವಾರ ತಾಲೂಕಿನ ಕಡವಾಡ ಗ್ರಾಮದ ರೈತರಿಗೆ ಶ್ರಾವಣ ಮುಗಿದು ಚೌತಿ ಬಂತೆಂದರೆ ಸುಗ್ಗಿಯ ಸಂಭ್ರಮ. ಗ್ರಾಮದ ನೂರಾರು ರೈತರು ಪ್ರತಿ ಮಳೆಗಾಲದಲ್ಲಿ ತಮ್ಮ ತುಂಡು ಭೂಮಿಯಲ್ಲಿಯೇ ಹತ್ತಾರು ಬಗೆಯ ಸಾವಯವ ತರಕಾರಿಗಳನ್ನು ಬೆಳೆಯುತ್ತಾರೆ. ಕೇವಲ ಸಗಣಿ ಗೊಬ್ಬರ ಮಾತ್ರ ಬಳಕೆ ಮಾಡುವುದರಿಂದ ಇಲ್ಲಿ ಬೆಳೆಯುವ ತರಕಾರಿಗಳಿಗೆ ಸಾಕಷ್ಟು ಬೇಡಿಕೆಯಿದೆ. ಬೇಸಿಗೆ ಸಂದರ್ಭದಲ್ಲಿ ಬಸಲೆ, ಕೆಂಪು ಬಾಜಿಗಳನ್ನು ಬೆಳೆದು ಉಪಜೀವನ ನಡೆಸುವ ರೈತರು, ಮಳೆಗಾಲದಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ.
ಇಲ್ಲಿ ಬೆಳೆದ ತರಕಾರಿಗಳನ್ನು ಗೋವಾ, ಮಹಾರಾಷ್ಟ್ರ ಭಾಗಗಳಿಗೂ ಕೊಂಡೊಯ್ದು ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ರೈತರ ವ್ಯಾಪಾರಕ್ಕೆ ಕೊರೊನಾ ಅಡ್ಡಿಯಾಗಿದೆ. ಇದರಿಂದ ಕೇವಲ ಸ್ಥಳೀಯವಾಗಿ ಮಾತ್ರ ಮಾರಾಟ ಮಾಡುತ್ತಿದ್ದು, ಅಷ್ಟಾಗಿ ಲಾಭ ಸಿಗುತ್ತಿಲ್ಲ. ಇನ್ನು, ಈ ಬಾರಿ ಒಮ್ಮೆಲೆ ಮಳೆ ಅಧಿಕವಾಗಿರುವುದರಿಂದ ತರಕಾರಿ ಗಿಡಗಳಿಗೆ ಹಾನಿಯಾಗಿದೆ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಕೂಡ ಬಂದಿಲ್ಲ. ಹೀಗಾಗಿ ರೈತರು ನಷ್ಟ ಅನುಭವಿಸುತ್ತಿದ್ದಾರೆ.