ಕಾರವಾರ: ಈ ಬಾರಿಯ ಚುನಾವಣೆಯಲ್ಲಿ ಮತಗಳಿಕೆ ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಅನಂತಕುಮಾರ್ ಹೆಗಡೆ, ಕೇಂದ್ರ ಸಚಿವರಾಗಿ ಲೂಟಿ ಮಾಡಿದ ಹಣದ ಮೂಲಕ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಉತ್ತರಕನ್ನಡ ಜಿಲ್ಲೆಯ ಕುಮಟಾ ಪಟ್ಟಣಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಕುಮಾರಸ್ವಾಮಿ ಪಟ್ಟಣದ ಮಹತ್ಮಾಗಾಂಧಿ ಕ್ರೀಡಾಂಗಣದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಭಾಷಣ ಮಾಡಿದರು.
ಈ ವೇಳೆ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ವಿರುದ್ಧ ಕಿಡಿಕಾರಿದ ಅವರು, ಹೆಗಡೆ ಹಿಂದುಳಿದ ಯುವಕರನ್ನ ಬಳಸಿಕೊಂಡು ನಂತರ ಕೈ ಬಿಟ್ಟಿದ್ದಾರೆ. ಸಚಿವರಾದ ನಂತರ ಲೂಟಿ ಮಾಡಿದ ಹಣವನ್ನ ಬಳಸಿ ಚುನಾವಣೆ ನಡೆಸಲು ಮುಂದಾಗಿದ್ದಾರೆ. ಅವರ ಬೆಂಬಲಿಗರು ಹಣದ ಸಮೇತ ಚುನಾವಣಾ ಆಯೋಗದ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಬಾರಿ ಅವರಿಗೆ ದುಡಿಯಲು ಕಾರ್ಯಕರ್ತರಿಲ್ಲ, ಅದಕ್ಕಾಗಿ ಹಣ ಹಂಚಿ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಕಳೆದ ಚುನಾವಣೆಯಲ್ಲಿ ಅತಿಕ್ರಮಣ ಸಮಸ್ಯೆ ಬಗೆಹರಿಸುವ ಬಗ್ಗೆ ಜಿಲ್ಲೆಯ ಜನರಿಗೆ ಮಾತು ಕೊಟ್ಟಿದ್ದೆ. ಆದರೆ ನಾವು ತೆಗೆದುಕೊಂಡ ತೀರ್ಮಾನಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ್ದರಿಂದ ಹಿನ್ನೆಡೆಯಾಗಿದೆ. ಇದಕ್ಕೆ ಅರಣ್ಯ ಕಾಯಿದೆಯಲ್ಲಿ ಕೇಂದ್ರ ಸರ್ಕಾರ ಕೆಲ ತಿದ್ದುಪಡಿ ಮಾಡಬೇಕಿದೆ. ಹಾಗಾಗಿ, ಆದರೆ ಇಷ್ಟು ವರ್ಷ ಸಂಸದರಾಗಿದ್ದ ಅನಂತಕುಮಾರ್ ಏನು ಮಾಡಿದ್ದೀಯಾ? ಎಂದು ನೀವು ಅವರನ್ನು ಪ್ರಶ್ನಿಸಬೇಕು ಎಂದು ಹೇಳಿದರು.
ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಪರ ಮಾತನಾಡಿದ ಸಿಎಂ, ಧರ್ಮ ರಕ್ಷಣೆ ಮಾಡುತ್ತೇನೆ ಎನ್ನುವ ಅನಂತಕುಮಾರ್ ಯುವಕರಿಗೆ ಉದ್ಯೋಗ ಕೊಡುವುದನ್ನು ಬಿಟ್ಟು ಕೈ ಕತ್ತಿ ಕೊಡುತ್ತಿದ್ದಾರೆ. ಆದ್ದರಿಂದ ಯುವಕರು ಎಚ್ಚೆತ್ತುಕೊಂಡು ಇಂತಹ ಪ್ರಚೋದನೆ ನೀಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದರು. ಈ ಬಾರಿಯಾದರೂ ಸಂಸದರನ್ನು ಬದಲಾವಣೆ ಮಾಡಿ, ಒಂದು ಅವಕಾಶ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.