ಶಿರಸಿ (ಉತ್ತರಕನ್ನಡ): ಕೃಷಿ ವಿಶ್ವವಿದ್ಯಾಲಯಗಳು ಕೇವಲ ಬೋಧನೆಗಷ್ಟೇ ಸೀಮಿತವಾಗದೆ, ರೈತ ಸ್ನೇಹಿಯಾಗಬೇಕು. ಕೃಷಿ ವಿಜ್ಞಾನಿಗಳು ರೈತರ ಹೊಲದ ಕಡೆಗೂ ಹೋಗಿ ಕೃಷಿಕರಿಗೆ ಅರಿವು ಮೂಡಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಶಿರಸಿಯಲ್ಲಿ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ನೂತನ ಆಡಳಿತ ಭವನ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾಲಯದ ವ್ಯಾಪ್ಯಿಗೊಳಪಡುವ ಪ್ರತಿ ಜಿಲ್ಲೆಗೊಬ್ಬ ನೋಡೆಲ್ ಅಧಿಕಾರಿ ಹಾಗೂ ಪ್ರತಿಯೊಂದು ರೈತ ಸಂಪರ್ಕ ಕೇಂದ್ರಕ್ಕೆ ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಬೇಕು. ಕೊರೊನಾ ಕಾರಣಕ್ಕಾಗಿ ಪಟ್ಟಣದಿಂದ ಹಳ್ಳಿಗಳಿಗೆ ವಲಸೆ ಹೋಗಿರುವ ಯುವಕರಿಗೆ ಕೃಷಿಯಿಂದಾಗಿ ಉದ್ಯೋಗ ಸಿಗುವಂತಾಗಿದೆ. ಇದರಿಂದ ಯುವಕರು ಕೃಷಿ ಭೂಮಿ ಖರೀದಿಸಿ, ತಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತಾಗಿದೆ ಎಂದರು.
ಈ ಬಾರಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ರೈತರ ಆದಾಯ ದುಪ್ಪಟ್ಟಗೊಳಿಸುವ ಬೆಳೆಗೆ ಉತ್ತಮ ಬೆಲೆ ನೀಡುವಂತೆ ಮಾಡಲು ಸರ್ಕಾರ ಮಹತ್ವದ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಇದರ ಪ್ರಮುಖ ಭಾಗವಾಗಿ ಆಸ್ಟ್ರೇಲಿಯಾದಲ್ಲಿ ಬೆಳೆ ಸಮೀಕ್ಷೆಗೆ ಇದ್ದಂತಹ ಆ್ಯಪ್ ಸೌಲಭ್ಯವನ್ನು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೊಳಿಸಲಾಗಿದೆ. ರೈತ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ತನ್ನ ಬೆಳೆಗೆ ತಾನೇ ಮೌಲ್ಯಮಾಪನ ಮಾಡಿ ಪ್ರಮಾಣಪತ್ರ ನೀಡುವ ಹಾಗೂ ಸರ್ಕಾರದಿದ ಸೌಲಭ್ಯವನ್ನು ಪಡೆಯುವಂತಹ ಕ್ರಾಂತಿಕಾರಕ ಹೆಜ್ಜೆ ಇದಾಗಿದೆ ಎಂದರು.