ಭಟ್ಕಳ (ಉತ್ತರಕನ್ನಡ): ಪಾಲಕರ ಕಣ್ತಪ್ಪಿಸಿ ಮುಂಬೈಗೆ ತೆರಳಲು ಸಜ್ಜಾದ ಅಪ್ರಾಪ್ತ ಜೋಡಿಯೊಂದು ರೈಲ್ವೆ ಪೊಲೀಸರ ಸಮಯ ಪ್ರಜ್ಞೆಯಿಂದ ಮನೆಗೆ ಮರಳುವಂತಾಗಿದೆ. ಈ ಘಟನೆ ತಡ ರಾತ್ರಿ ಭಟ್ಕಳ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ತಾಲೂಕಿನ ಬೈಲೂರಿನ 16 ವರ್ಷದ ಬಾಲಕ, ಮುರ್ಡೇಶ್ವರದ 15ರ ಬಾಲಕಿ ಮುಂಬೈಗೆ ತೆರಳಲು ಸಜ್ಜಾಗಿದ್ದರು. ಶುಕ್ರವಾರ ರಾತ್ರಿ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ಮತ್ತೊಂದೆಡೆ ಬಾಲಕ ಅವರ ಮನೆಯಿಂದ ನಾಪತ್ತೆಯಾಗಿದ್ದ. ನಂತರ ಇಬ್ಬರು ಮುಂಬೈಗೆ ತೆರಳಲು ಅಪ್ರಾಪ್ತರು ಭಟ್ಕಳ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರು.
ಈ ಅಪ್ರಾಪ್ತ ಜೋಡಿ ಮುಂಬೈಗೆ ತೆರಳುವ ರೈಲಿನ ಕುರಿತು ಮಾಹಿತಿ ಪಡೆದಿದ್ದಾರೆ. ಈ ವೇಳೆ ಇವರ ಚಟುವಟಿಕೆಗಳನ್ನು ಗಮನಿಸುತ್ತಿದ್ದ ರೈಲ್ವೆ ಪೊಲೀಸರಿಗೆ ಹಾಗೂ ಕರ್ತವ್ಯದಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿಗಳಿಗೂ ಇವರ ಮೇಲೆ ಅನುಮಾನ ಬಂದಿದೆ. ನಂತರ ಬಾಲಕಿಯ ಬಳಿ ತೆರಳಿ ವಿಚಾರಿಸಿದ್ದಾರೆ.
ಬಾಲಕ ನಿನಗೆ ಏನಾಗಬೇಕು ಎಂದಾಗ ಅಣ್ಣನಾಗಬೇಕು ಎಂದು ತೊದಲುತ್ತಾ ಉತ್ತರಿಸಿದ್ದಾಳೆ. ಸಂಶಯಗೊಂಡ ಪೊಲೀಸರು ಮತ್ತೆ ಕೇಳಿದಾಗ ‘ನಾನು ಆತನನ್ನು ಪ್ರೀತಿಸುತ್ತಿದ್ದು, ಮನೆ ಬಿಟ್ಟು ಆತನ ಜೊತೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾಗಿ ಒಪ್ಪಿಕೊಂಡಿದ್ದಾಳೆ.
ರೈಲ್ವೆ ಪೊಲೀಸ್ ಅಧಿಕಾರಿ ಸಿಂಗ್ ಭಟ್ಕಳ ಶಹರ್ ಠಾಣೆಗೆ ಮಾಹಿತಿ ನೀಡಿ ಅವರ ಪಾಲಕರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ. ಪಾಲಕರ ಸಮ್ಮುಖದಲ್ಲಿ ಇಬ್ಬರಿಗೂ ಬುದ್ಧಿವಾದ ಹೇಳಿ ಅವರವರ ಮನೆಗೆ ಕಳಿಸಲಾಗಿದೆ.
ಈ ಘಟನೆ ಕುರಿತು ಯಾವುದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.