ಕಾರವಾರ: ಕಳೆದ ಏಳು ವರ್ಷಗಳಿಂದ ಕೇವಲ ಕಾರವಾರವಷ್ಟೇ ಅಲ್ಲದೇ, ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಜನರಲ್ಲಿ ಸ್ವಚ್ಛತೆಯ ಪ್ರಜ್ಞೆ ಮೂಡಿಸುತ್ತಿರುವ ಕಾರವಾರದ ಪಹರೆ ವೇದಿಕೆಯ ಕಾರ್ಯಕರ್ತರು ಭಾನುವಾರ ಸಾರ್ವಜನಿಕರೊಡಗೂಡಿ ಸುಮಾರು 35 ಕಿಲೋ ಮೀಟರ್ ಪಾದಯಾತ್ರೆ ನಡೆಸುವ ಮೂಲಕ ಸ್ವಚ್ಛತೆಯ ಜಾಗೃತಿಯತ್ತ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
2015ರಲ್ಲಿ ಕಾರವಾರದ ವಕೀಲ ನಾಗರಾಜ ನಾಯಕ ಅವರ ನೇತೃತ್ವದಲ್ಲಿ ಸಮಾನ ಮನಸ್ಕರಿಂದ ಆರಂಭವಾದ ಪಹರೆ ವೇದಿಕೆಯಿಂದ ಪ್ರತಿ ಶನಿವಾರ ಕಾರವಾರದಲ್ಲಿ ಸ್ವಚ್ಛತಾ ಕಾರ್ಯ ನಡೆಸಿಕೊಂಡು ಬರುವ ಮೂಲಕ ಸ್ವಚ್ಛ ಕಾರವಾರಕ್ಕೆ ಸಹಯೋಗ ನೀಡಲಾಗುತ್ತಿದೆ.
ಕೇವಲ ಕಾರವಾರ ಮಾತ್ರವಲ್ಲದೇ, ಜಿಲ್ಲೆಯ ಪ್ರಮುಖ ತಾಣಗಳಿಗೂ ತೆರಳಿ ಸ್ವಚ್ಛತಾ ಕಾರ್ಯ ಮಾಡಿರುವ ಸಾಧನೆ ಈ ವೇದಿಕೆಯ ಕಾರ್ಯಕರ್ತರದ್ದು. ಕಾರವಾರ- ಕೋಡಿಬಾಗ ರಸ್ತೆಯಲ್ಲಿ ಗಿಡಗಳನ್ನೂ ನೆಟ್ಟು, ಅವುಗಳನ್ನು ಪೋಷಿಸುವ ಕಾರ್ಯವನ್ನು ಕೂಡ ಈ ವೇದಿಕೆ ಮಾಡುತ್ತಿದೆ.
ಕಾರವಾರದಿಂದ ಅಂಕೋಲಾದವರೆಗೆ 35 ಕಿಲೋ ಮೀಟರ್ನಷ್ಟು ಪಾದಯಾತ್ರೆ: ಕಾರವಾರದ ಸುಭಾಷ್ ವೃತ್ತದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಹಿರಿಯ ಪತ್ರಕರ್ತ ಗಂಗಾಧರ ಹಿರೇಗುತ್ತಿ, ಕ್ರಿಮ್ಸ್ನ ನಿರ್ದೇಶಕ ಡಾ.ಗಜಾನನ ನಾಯಕ, ಸರ್ಜನ್ ಡಾ.ಶಿವಾನಂದ ಕುಡ್ತರಕರ್ ಅವರು ರಾಷ್ಟ ಧ್ವಜವನ್ನು ಪಹರೆ ವೇದಿಕೆಯ ಗೌರವಾಧ್ಯಕ್ಷ ಪ್ರಕಾಶ್ ಕೌರ್ ಅವರಿಗೆ ಹಸ್ತಾಂತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.
ಪಹರೆಯ ಪಾದಯಾತ್ರೆಗೆ ಕಾರವಾರ ಸೈಕ್ಲಿಂಗ್ ಕ್ಲಬ್ ಸೇರಿದಂತೆ ಹತ್ತಾರು ಸಂಘಟನೆಗಳು ಕೂಡ ಬೆಂಬಲ ನೀಡಿ, ವೇದಿಕೆಯ ಕಾರ್ಯಕರ್ತರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: ಉಕ್ರೇನ್ ಬಿಕ್ಕಟ್ಟು ಭಾರತಕ್ಕೆ ಎಚ್ಚರಿಕೆಯ ಕರೆಗಂಟೆ: ಸಚಿವ ಗೋಯಲ್