ಉಡುಪಿ: ರಾಮ ಮಂದಿರ ನಿರ್ಮಿಸಲು ನಮಗೆ ಪಿಎಫ್ಐ ಸಂಘಟನೆಯ ಹಣದ ಅಗತ್ಯವಿಲ್ಲ ಎಂದು ಸಂಸದೆ ಶೋಭಾ ಕೆರಂದ್ಲಾಜೆ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಪಿಎಫ್ಐ ಕಾರ್ಯಕರ್ತರ ಬಳಿ ನಮ್ಮ ಕಾರ್ಯಕರ್ತರು ಹಣ ಕೇಳಲು ಹೋಗಿಲ್ಲ. ಅದೊಂದು ರಾಷ್ಟ್ರ ವಿರೋಧಿ ಸಂಘಟನೆ. ಅವರು ನಮ್ಮ ಆರ್ಎಸ್ಎಸ್ ಸ್ವಯಂಸೇವಕರನ್ನು ಕೊಲೆ ಮಾಡಿದ್ದಾರೆ. ರಾಮ ಮಂದಿರದ ಬಗ್ಗೆ ಅವರಿಗೆ ಮಾತನಾಡುವ ಹಕ್ಕಿಲ್ಲ. ಆ ಸಂಘಟನೆಯನ್ನು ನಿಷೇಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಮಾತುಕತೆ ಮಾಡಿದ್ದೇನೆ. ಪಿಎಫ್ಐ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಗೃಹ ಸಚಿವಾಲಯ ತನಿಖೆ ನಡೆಸುತ್ತಿದೆ. ತನಿಖೆ ಮುಗಿದ ನಂತರ ಅದನ್ನು ನಿಷೇಧಿಸಲಾಗುವುದು ಎಂದು ತಿಳಿಸಿದರು.
ಕೇರಳದಲ್ಲಿ ಆರ್ಎಸ್ಎಸ್ಗೆ ಅವಮಾನಿಸಿ ಪಿಎಫ್ಐ ಮೆರವಣಿಗೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶೋಭಾ, ಪಿಎಫ್ಐ ಆಯುಧಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸುತ್ತಿದೆ. ಅದು ರಾಷ್ಟ್ರ ವಿರೋಧಿ ಸಂಸ್ಥೆ ಎಂದು ಕೇರಳ ಸರ್ಕಾರಕ್ಕೆ ತಿಳಿದಿದ್ದರೂ ವೋಟ್ ಪಡೆಯಲು ಓಲೈಕೆ ಮಾಡುತ್ತಿದೆ ಎಂದು ದೂರಿದರು.