ಉಡುಪಿ: ಬಗೆಬಗೆಯ ಖಾದ್ಯಗಳಿಗೆ ಕರಾವಳಿ ಫೇಮಸ್. ಕರಾವಳಿಯ ತಿನಿಸುಗಳಿಗೆ ವಿಶ್ವದಲ್ಲೇ ಭಾರಿ ಬೇಡಿಕೆಯಿದೆ. ಸದ್ಯ ಕಡಲೂರಿನಲ್ಲಿ ಜಡಿ ಮಳೆಯೊಂದಿಗೆ ಗುಡುಗು ಸದ್ದು ಮಾಡುತ್ತದೆ. ಇಂತಹ ಗುಡುಗಿಗೆ ಹುಟ್ಟುವ ಕಲ್ಲಣಬೆ ರುಚಿ ಸವಿಯುವುದೇ ಒಂದು ಅದ್ಭುತ ಅನುಭವ.
ಕರಾವಳಿಯ ತಿಂಡಿ ತಿನಿಸುಗಳಿಗೆ ಮಾರು ಹೋಗದ ಖಾದ್ಯ ಪ್ರಿಯರೇ ಇಲ್ಲ. ಅಂತಹ ವಿಶೇಷ ಖಾದ್ಯಗಳಲ್ಲಿ ಕಲ್ಲಣಬೆ ಕೂಡ ಒಂದು. ಇದನ್ನು ಕರಾವಳಿಯಲ್ಲಿ ಕಲಲಾಂಬು ಎನ್ನುತ್ತಾರೆ. ಮಳೆಗಾಲದಲ್ಲಿ ಮಾತ್ರ ಈ ರುಚಿ ತಯಾರಾಗುತ್ತದೆ.
ಮಳೆಗಾಲದಲ್ಲಿ ಜೋರಾಗಿ ಗುಡುಗು ಬಂದಾಗ ಗುಡ್ಡ ಪ್ರದೇಶದ, ಮರಳು ಮಿಶ್ರಿತ ಕೆಂಪು ಮಣ್ಣಿನಲ್ಲಿ, ಮಣ್ಣಿನ ಮೇಲ್ಪದರದಲ್ಲಿ ಈ ಕಲ್ಲಣಬೆ ಹುಟ್ಟಿಕೊಳ್ಳತ್ತದೆ. ಮಳೆಗಾಲದಲ್ಲಿ ಉಡುಪಿ ಭಾಗದ ಸರಳಬೆಟ್ಟು ಪರಿಸರದಲ್ಲಿ ಹೆಚ್ಚಾಗಿ ಕಂಡುಬರುವ ಈ ಕಲ್ಲಣಬೆಯನ್ನು, ಇಲ್ಲಿನ ಯುವಕರ ತಂಡವೊಂದು ಬೆಟ್ಟಕ್ಕೆ ಹತ್ತಿ ಹುಡುಕಾಡುತ್ತಾರೆ. ಸಣ್ಣ ಕೋಲಿನ ಸಹಾಯದಿಂದ ಅಗೆದು ಕೊರ ತೆಗೆಯುತ್ತಾರೆ.
ಸಣ್ಣದಾದ ಚೆಂಡಿನ ಆಕಾರದಲ್ಲಿರುವ ಈ ಕಲ್ಲಣಬೆಯನ್ನು ಮನೆಗೆ ತಂದು, ಚೆನ್ನಾಗಿ ತೊಳೆದು ಶುಚಿಗೊಳಿಸುತ್ತಾರೆ. ಬಳಿಕ ಕಲ್ಲಣಬೆಯ ಮೇಲ್ಪದರ ತೆಗೆದು ಮಸಾಲ ಸೇರಿಸಿ ರುಚಿ ರುಚಿಯಾದ ರೆಸಿಪಿ ತಯಾರಿಸುತ್ತಾರೆ. ಮಣ್ಣಿನ ಪಾತ್ರೆಯಲ್ಲಿ ಕಟ್ಟಿಗೆ ಒಲೆಯಲ್ಲಿ ತಯಾರಿಸಿದ ಕಲ್ಲಣಬೆ ಪದಾರ್ಥ ಸಿಕ್ಕಾಪಟ್ಟೆ ಟೇಸ್ಟ್ ಇರುತ್ತದೆ.
ಕಲ್ಲಣಬೆ ನಾನ್ವೆಜ್ ರುಚಿಯ ಹೋಲಿಕೆ ಇದೆ. ಆದ್ರೆ ಇದನ್ನು ಸಸ್ಯಹಾರಿಗಳೂ ಸೇವಿಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಕೆಜಿಗೆ 800ರಿಂದ 1000ದವರೆಗೂ ಬೇಡಿಕೆ ಇದೆ. ಹಣ ಎಷ್ಟಾದರೇನು ಅಣಬೆ ರುಚಿ ಸವಿಯೋಣ ಅಂತ ಕಲ್ಲಣಬೆ ಪ್ರಿಯರು ಖರೀದಿಸುತ್ತಾರೆ.
ಜಿಟಿ ಜಿಟಿ ಮಳೆ, ಚುಮು ಚುಮು ಚಳಿ, ಅಡುಗೆ ಮನೆಯಲ್ಲಿ ಘಮಘಮ ಕಲ್ಲಣಬೆ ಪದಾರ್ಥದ ಪರಿಮಳ. ಮಳೆಗಾಲದಲ್ಲಿ ನೀವೆನಾದ್ರೂ ಕರಾವಳಿಗೆ ಬಂದ್ರೆ ಕಲ್ಲಣಬೆ ರುಚಿ ಸವಿಯೋದು ಮರಿಬೇಡಿ ಮಾರ್ರೆ..