ಉಡುಪಿ: ಕುಂದಾಪುರ -ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೇರಿಕುದ್ರು ಶ್ರೀಅರೆಕಲ್ಲು ಬೊಬ್ಬರ್ಯ ದೇವಾಲಯದಲ್ಲಿ ಕಳ್ಳತನಕ್ಕೆ ಯತ್ನಿಸಿದ ಖದೀಮನನ್ನು ಸಾರ್ವಜನಿಕರು ಥಳಿಸಿ ಕುಂದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಭಟ್ಕಳ ತಾಲೂಕಿನ ಅಂಬರಹಿತ್ಲು, ಮುಂಡಳ್ಳಿ ನಿವಾಸಿ ಸತೀಶ್ ಮಹಾದೇವ ನಾಯ್ಕ (31) ಬಂಧಿತ ಆರೋಪಿ. ಈತ ಮುಂಜಾನೆ ವೇಳೆ ದೇವಸ್ಥಾನದ ಕಾಣಿಕೆ ಡಬ್ಬಿಗೆ ಸರಳು ಹಾಕಿ ಒಪನ್ ಮಾಡಲು ಯತ್ನಿಸುತ್ತಿದ್ದನು. ಇದನ್ನು ಗಮನಿಸಿದ ದೇವಸ್ಥಾನದ ಮುಖ್ಯಸ್ಥರು ಟಾರ್ಚ್ ಲೈಟ್ ಹಾಕಿದ್ದಾರೆ.
ಅಲ್ಲಿಂದ ಆರೋಪಿ ಕಾಲ್ ಕಿತ್ತಿದ್ದಾನೆ. ಈ ವಿಷಯ ತಿಳಿದ ಸ್ಥಳೀಯರು ಕಳ್ಳನ ಹುಡುಕಾಟ ನಡೆಸಿದ್ದು, ಪೊದೆಯಲ್ಲಿ ಅವಿತು ಕುಳಿತ್ತಿದ್ದನು. ಕೊನೆಗೂ ಸಿಕ್ಕ ಕಳ್ಳನನ್ನು ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಹೊನ್ನಾವರ, ಭಟ್ಕಳ, ಕಲಘಟಗಿ, ಮಂಕಿ, ಅಂಕೋಲಾ ಸೇರಿದಂತೆ ಮುಂತಾದ ಕಡೆಗಳಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿದ್ದನು.
ಸದ್ಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.