ಉಡುಪಿ: ಜಿಲ್ಲೆಯಲ್ಲಿ ಕೊರೊನಾ ವಿರುದ್ಧದ ಸಮರ ಜೋರಾಗಿದೆ. ಸೋಂಕಿತರ ಸಂಖ್ಯೆ ಏರುತ್ತಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದೀಗ ರಾಜ್ಯದಲ್ಲೇ ಮೊದಲ ಬಾರಿಗೆ ‘ನನ್ನ ಕುಟುಂಬ ನನ್ನ ಜವಾಬ್ದಾರಿ’ ಎಂಬ ವಿಶಿಷ್ಟ ಅಭಿಯಾನ ಆರಂಭಿಸಿದೆ.
ಕೊರೊನಾ ಪೀಡಿತ ಜಿಲ್ಲೆಗಳ ಅಗ್ರಪಟ್ಟಿಯಲ್ಲಿ ಬರುವ ಉಡುಪಿಯಲ್ಲಿ ಮಾರಕ ರೋಗದ ನಿಯಂತ್ರಣಕ್ಕೆ ನಾನಾ ಉಪಾಯ ಮಾಡಲಾಗುತ್ತಿದೆ. ಇದರ ಭಾಗವಾಗಿ ‘ನನ್ನ ಕುಟುಂಬ ನನ್ನ ಜವಾಬ್ದಾರಿ’ ಎಂಬ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡುತ್ತಾರೆ. ಈ ವೇಳೆ, ಮನೆಯ ಹಿರಿಯ ಜೀವಗಳನ್ನು ರಕ್ಷಿಸುವುದು ಹೇಗೆ ಎನ್ನುವ ಬಗ್ಗೆ ಮಾಹಿತಿ ನೀಡುತ್ತಾರೆ.
ಪ್ರತಿ ಮನೆಯ ಗೋಡೆಗೂ ಪ್ರತಿಜ್ಞಾ ವಿಧಿಯ ಸ್ಟಿಕ್ಕರ್ ಅಂಟಿಸುತ್ತಾರೆ. ಹಿರಿಯರನ್ನು ರಕ್ಷಿಸುವುದು ನನ್ನ ಜವಾಬ್ದಾರಿ ಎಂಬ ಪತ್ರಕ್ಕೆ ಮನೆಯವರಿಂದ ಸಹಿ ಪಡೆದುಹೋಗುತ್ತಾರೆ. ಈ ಮೂಲಕ ಜಿಲ್ಲೆಯ ಪ್ರತಿಯೊಂದು ಹಿರಿಯ ಜೀವವನ್ನೂ ರಿವರ್ಸ್ ಕ್ವಾರಂಟೈನ್ಗೆ ಒಳಪಡಿಸಿ ರಕ್ಷಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ.
ಆರೋಗ್ಯವಂತರಾಗಿರುವ ಹಿರಿಯ ನಾಗರಿಕರನ್ನು ಮನೆಯಲ್ಲೇ ಪ್ರತ್ಯೇಕಿಸುವ ಕಮಿಟ್ಮೆಂಟ್ಗೆ ಪ್ರತಿಯೊಬ್ಬರಿಂದಲೂ ಸಹಿ ಪಡೆಯಲಾಗುತ್ತಿದೆ. ಅಭಿಯಾನದ ಭಾಗವಾಗಿ ಆಶಾ ಕಾರ್ಯಕರ್ತೆಯರು ಪಲ್ಸ್ ಆಕ್ಸಿ ಮೀಟರ್ ಜೊತೆಗೆ ಪ್ರತಿ ಮನೆಗೂ ಭೇಟಿ ಕೊಡುತ್ತಾರೆ. ಮನೆಯ ಸದಸ್ಯರ ಆಕ್ಸಿಜನ್ ಪ್ರಮಾಣವನ್ನು ಪರಿಶೀಲಿಸುತ್ತಾರೆೆ. ಒಂದು ವೇಳೆ ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದರೆ ಕೊರೊನಾ ಟೆಸ್ಟ್ಗೂ ಒಳಗಾಗಬೇಕಾಗುತ್ತೆ. ಈ ಮೂಲಕ ಮೂಲದಲ್ಲೇ ರೋಗಿಗಳನ್ನು ಪತ್ತೆ ಹಚ್ಚುವ ಕಾರ್ಯಕ್ರಮ ರೂಪಿಸಲಾಗಿದೆ.
ಕೊರೊನಾ ಬಂದ ನಂತರ ತರಗತಿಗಳು ಆನ್ಲೈನ್ ನಡೆಯುತ್ತೆ. ಹಾಗಾಗಿ ಯುವಜನಾಂಗ ಮತ್ತು ಮಕ್ಕಳನ್ನು ತಲುಪಲು ಇದಕ್ಕಿಂತ ಪರಿಣಾಮಕಾರಿ ಮಾಧ್ಯಮ ಬೇರೊಂದಿಲ್ಲ. ಹಾಗಾಗಿ ಆನ್ಲೈನ್ ತರಗತಿಗಳಲ್ಲಿ ಕೊನೆಯ ಐದು ನಿಮಿಷ ಕಡ್ಡಾಯವಾಗಿ ಕೊರೊನಾದ ಬಗ್ಗೆ ಜಾಗೃತಿಯ ಪಾಠ ಮಾಡುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ.