ಉಡುಪಿ: ನಗರ ಪೊಲೀಸ್ ಠಾಣೆ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಕಾರ್ಯಕರ್ತರು ವಾರಸುದಾರರು ಇಲ್ಲದ ನಾಲ್ಕು ಶವಗಳಿಗೆ ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ಅಂತಿಮ ಗೌರವಗಳೊಂದಿಗೆ ದಫನ ಮಾಡಿದರು.
ಮೃತಪಟ್ಟವರು ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು. ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳದರು. ಸಮಿತಿ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಮಾನವೀಯತೆ ನೆಲೆಯಲ್ಲಿ ಮೂವರು ಅಪರಿಚಿತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.
ಕೆಲವು ದಿನಗಳ ಹಿಂದೆ ಅವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದರು. ಮೃತದೇಹಗಳನ್ನು ಪಡೆಯಲು ವಾರಸುದಾರರ ಬರುವಿಕೆ ನಿರೀಕ್ಷೆಯಲ್ಲಿ ಶವಾಗಾರದಲ್ಲಿ ಇಡಲಾಗಿತ್ತು. ವಾರಸುದಾರರ ಆಹ್ವಾನದ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು.
ಕಾಲಮಿತಿ ಕಳೆದರೂ ಯಾರೂ ಬಾರದ ಕಾರಣ ಕಾನೂನು ಪ್ರಕ್ರಿಯೆ ನಡೆಸಿ ಬಳಿಕ ತನಿಖಾ ಸಹಾಯಕ ವಿಶ್ವನಾಥ್ ಶೆಟ್ಟಿ ಅಮಾಸೆಬೈಲು ಅವರ ಸಮಕ್ಷಮ ದಫನ ಮಾಡಲಾಯಿತು.