ಉಡುಪಿ: ಕರಾವಳಿ ಭಾಗದ ಮೀನುಗಾರರು ಪ್ಯಾಕೇಜ್ ಘೋಷಣೆಗೆ ಬೇಡಿಕೆಯಿರಿಸಿದ್ದಾರೆ. ಆದರೀಗ ರೇಷನ್ ಸಹಿತ ಮೂಲಭೂತ ವ್ಯವಸ್ಥೆಯನ್ನಷ್ಟೇ ಮಾಡಬಹುದು ಅಂತ ಮೀನುಗಾರಿಕೆ, ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ವೈಯುಕ್ತಿಕವಾಗಿ ತೆರಳಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ಮೀನುಗಾರರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ತೇವೆ. ಸರ್ಕಾರ ನೆರವು ನೀಡುತ್ತೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಹಕರಿಸಿ. ಸಚಿವೆ ಶಶಿಕಲಾ ಜೊಲ್ಲೆ ಕೂಡಾ ಮೀನುಗಾರರಿಗೆ ನೆರವು ಕೇಳಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ಹೇಳಿದ್ರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ವೇಳೆ ಜನಸಂದಣಿ ಹೆಚ್ಚಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮೂರು ದಿನ ಕಟ್ಟುನಿಟ್ಟಿನ ಕರ್ಫ್ಯೂ ಪಾಲಿಸಲಾಗಿದೆ. ದಿನಸಿ, ಹಾಲು ಖರೀದಿಗೆ ಅವಕಾಶ ನೀಡಲಾಗಿದೆ. ಒತ್ತಡ ಹೆಚ್ಚಾಗಿ ಜನರು ಹೊರ ಬಂದಿರುವುದು ನಿಜ. ಜನರು ಅವಶ್ಯಕ ಸಾಮಾಗ್ರಿಗಳನ್ನು ಪಡೆಯಲು ರಸ್ತೆಗೆ ಬಂದಿದ್ದಾರೆ. ಇವತ್ತು ಸಮಸ್ಯೆ ಆಗಿದೆ ನಿಜ, ಅಗತ್ಯಬಿದ್ದರೆ ಇನ್ನಷ್ಟು ನಿಯಮಗಳನ್ನು ಸಡಿಲ ಮಾಡಲು ಪ್ರಯತ್ನಿಸಿ ಶಾಂತಿಯುತ ವಹಿವಾಟಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಅತಂತ್ರರಾದ ವಲಸೆ ಕಾರ್ಮಿಕರ ಊಟೋಪಚಾರ:
ಲಾಕ್ಡೌನ್ ಹಿನ್ನೆಲೆಯಲ್ಲಿ ಅತಂತ್ರರಾದ ವಲಸೆ ಕಾರ್ಮಿಕರ ಊಟೋಪಚಾರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ರಾಜ್ಯದ ಎಲ್ಲಾ ಎ ದರ್ಜೆಯ ದೇವಸ್ಥಾನದ ಮೂಲಕ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ. ಇದು ಕೇವಲ ಆದೇಶವಲ್ಲ, ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದೇನೆ. ಉಡುಪಿ ಜಿಲ್ಲೆಯ ಅಂಬಲಪಾಡಿ, ಕೊಲ್ಲೂರು, ಮಂದಾರ್ತಿ, ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು, ಕದ್ರಿ ದೇವಸ್ಥಾನದಿಂದ ಸಹಾಯ ಸಿಗಲಿದೆ. ರಾಜ್ಯಾದ್ಯಂತ ಮುಜರಾಯಿ ದೇವಸ್ಥಾನಗಳು ಉಚಿತ ಊಟಕ್ಕೆ ವ್ಯವಸ್ಥೆ ಮಾಡಿಕೊಂಡಿದೆ ಎಂದು ಹೇಳಿದ್ರು.
ರಾಜ್ಯಾದ್ಯಂತ ಕರೋನಾ ಎಮರ್ಜೆನ್ಸಿ ವೇಳೆ ನಾಳೆ ಅಂದ್ರೆ ಏಪ್ರಿಲ್ ಒಂದರಂದು ರಾಜ್ಯದ 24,000 ನ್ಯಾಶನಲ್ ಹೆಲ್ತ್ ಮಿಶನ್ (ಎನ್ಎಚ್ಎಂ) ಸಿಬ್ಬಂದಿಗೆ ರಜೆ ನೀಡಲಾಗಿದೆ. ಒಂದು ದಿನ ರಜೆ ಕೊಡದಿದ್ದರೆ ಬೇರೆ ದಾರಿ ಇಲ್ಲ ಏಪ್ರಿಲ್ 1ಕ್ಕೆ ಕೆಲಸಕ್ಕೆ ಬರುತ್ತೇವೆ ಸಂಬಳ ಕೊಡಿ ಎಂದು ಸಿಬ್ಬಂದಿ ಕೇಳಿದ್ದಾರೆ. ಆದ್ರೆ ರಜೆ ಮತ್ತು ಸಂಬಳ ಕೊಡುವ ವಿಚಾರದಲ್ಲಿ ತಾಂತ್ರಿಕ ಸಮಸ್ಯೆ ಇದೆ. ಕೊರೊನಾ ಬಾಧಿಸಿರುವ ಸಂದರ್ಭ ಕಾನೂನು ಕಾಯಿದೆ ನಿಯಮ ನೋಡಿಕೊಂಡು ಇರಲು ಸಾಧ್ಯವಿಲ್ಲ ಇದು ವಾದ ಮಾಡುವ ಸಮಯವೂ ಅಲ್ಲ ರಾಜ್ಯಕ್ಕೆ ಸಮಸ್ಯೆಯಾಗದ ರೀತಿಯಲ್ಲಿ ಗೊಂದಲವನ್ನು ನಿವಾರಿಸಲಾಗುವುದು ಅಂತ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ರು.