ಉಡುಪಿ: ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರೆ ಆದರೆ, ಇದೇ ಹಾವು ಹಿಡಿಯುವ ಉಗರ ತಜ್ಞರೊಬ್ಬರ ಶಪಥ ಹದಿಮೂರು ವರ್ಷಕ್ಕೆ ಕೊನೆಗೊಂಡಿದೆ! ಏನದು ಶಪಥ ಅಂತ ಹೌಹಾರದಿರಿ...!
ಉಡುಪಿ ಜಿಲ್ಲೆಯ ಬಹ್ಮಾವರ ತಾಲೂಕಿನ ಸಾಲಿಗ್ರಾಮದ ಸುಧೀಂದ್ರ ಐತಾಳ ಎಂಬ ಪ್ರಾಣಿ ಪ್ರಿಯ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದಿಂದ ದೋಷಮುಕ್ತನಾಗುವ ವರೆಗೂ ಕೂದಲು ಗಡ್ಡ ತೆಗೆಯುದಿಲ್ಲ ಅಂತ ಶಪಥ ಮಾಡಿದ್ದರು. ಸದ್ಯ 13 ವರ್ಷಗಳ ಬಳಿಕ ಪ್ರಕರಣ ವಜಾಗೊಂಡಿದ್ದು, ಈ ಹಿನ್ನೆಲೆಯಲ್ಲಿ ಕೂದಲು ಗಡ್ಡಕ್ಕೆ ಕತ್ತರಿ ಹಾಕುವ ಮೂಲಕ ದೀರ್ಘಕಾಲದ ಶಪಥ ಅಂತ್ಯಗೊಳಿಸಿದ್ದಾರೆ.
ಗುರುನರಸಿಂಹ ದೇಗುಲದ ಬಳಿಯ ತಮ್ಮ ಮನೆಯಲ್ಲಿ ಐತಾಳರು ಪ್ರಾಣಿ ಸಂರಕ್ಷಣಾ ಕೇಂದ್ರ ನಡೆಸುತ್ತಿದ್ದರು. ಇದರಲ್ಲಿ ಅಪರೂಪದ ತಳಿಯ ವನ್ಯ ಜೀವಿಗಳನ್ನು ಇರಿಸಿ ಜನರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಅಂತ ಆರೋಪಿಸಿ ಅರಣ್ಯಧಿಕಾರಿಗಳು ದಾಳಿ ನಡೆಸಿ ವನ್ಯಜೀವಿಗಳನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದ್ದರು. ಇತ್ತ ಕೋರ್ಟ್ನಲ್ಲಿ ಐತಾಳರು, ದುರುದ್ದೇಶದಿಂದ ಹೀಗೆ ಮಾಡಿಲ್ಲ. ಅಪಾಯದಿಂದ ರಕ್ಷಣೆ ಮಾಡಿದ್ದೇನೆ ಅಂತ 13 ವರ್ಷಗಳ ಕಾಲ ಪ್ರತಿಪಾದನೆ ಮಾಡಿದ್ರು. ಇದರ ನಡುವೆ ನಡೆದ ಐತಾಳ ಮದುವೆಗೂ ಗಡ್ಡ ತೆಗೆಯದೇ ಶಪಥ ಉಳಿಸಿಕೊಂಡಿದ್ದರು.
ಕೊನೆಗೆ ಕುಂದಾಪುರ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರತಿವಾದಿಗಳು ಆರೋಪ ಸಾಬೀತು ಪಡಿಸಲು ವಿಫಲವಾದ ಹಿನ್ನೆಲೆಯಲ್ಲಿ ಪ್ರಕರಣ ವಜಾ ಮಾಡಲಾಯಿತು. ಇದೇ ಖುಷಿಯಲ್ಲಿ 13 ವರ್ಷಗಳ ಶಪತವನ್ನು ಕೂದಲು ಗಡ್ಡಕ್ಕೆ ಕತ್ತರಿ ಹಾಕಿ ಅಂತ್ಯಗೊಳಿಸಿದ್ದಾರೆ. ಸದ್ಯ ಉಗರ ತಜ್ಞ ಐತಾಳರು ಸ್ಮಾರ್ಟ್ ಐತಾಳರಾಗಿ ಬದಲಾಗಿದ್ದಾರೆ.