ತುಮಕೂರು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವಂತಹ 35 ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಅಲ್ಲದೇ ಸಿದ್ದಗಂಗಾ ಮಠದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಮಠಕ್ಕೆ ನಿತ್ಯ ನೀರಿನ ಟ್ಯಾಂಕರ್ಗಳ ಮೂಲಕ ನಗರಸಭೆಯ ನೀರು ಸರಬರಾಜು ಕೇಂದ್ರದಿಂದ ನೀರನ್ನು ಕೊಂಡೊಯ್ಯಲಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ವಿತರಿಸಲು ಈಗಾಗಲೇ ಗುತ್ತಿಗೆ ನೀಡಲಾಗಿದೆ. ಪ್ರತಿ ವಾರ್ಡಿಗೆ ಬೆಳಗ್ಗೆಯಿಂದ ಸಂಜೆವರೆಗೂ ಕನಿಷ್ಠ ಐದರಿಂದ ಏಳು ಟ್ಯಾಂಕರ್ ನೀರನ್ನು ವಿತರಿಸಲಾಗುತ್ತಿದೆ.
ನಗರಕ್ಕೆ ನೀರು ಹರಿಸುವ ಬುಗುಡನಹಳ್ಳಿ ಕೆರೆ ಮತ್ತು ಮೈದಾಳ ಕೆರೆಯಲ್ಲಿ ಕನಿಷ್ಠ ಪ್ರಮಾಣದ ನೀರು ಲಭ್ಯವಿದೆ. ಹೇಮಾವತಿ ಜಲಾಶಯದಿಂದ ಈ ಕೆರೆಗೆ ನೀರು ಹರಿಸಿದರೆ ಮಾತ್ರ ತುಮಕೂರು ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದಾಗಿದೆ.
ತುಮಕೂರು ನಗರಕ್ಕೆ ನಿತ್ಯ 57 ಎಂಎಲ್ಡಿ ನೀರು ಅಗತ್ಯವಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮುಂಜಾಗ್ರತ ಕ್ರಮವಾಗಿ 600 ಕೊಳವೆ ಬಾವಿಗಳನ್ನು ಕೊರೆಸಲಾಗಿತ್ತು. ಅವುಗಳ ಪೈಕಿ 200 ಕೊಳವೆ ಬಾವಿಗಳಲ್ಲಿ ಮಾತ್ರ ನಿರೀಕ್ಷೆಯಂತೆ ನೀರು ಲಭ್ಯವಾಗಿದೆ. ಹೀಗಾಗಿ ಪ್ರತಿ ವಾರ್ಡ್ಗಳಲ್ಲಿ ಒಂದೊಂದು ಪ್ರತ್ಯೇಕ ಕೊಳವೆ ಬಾವಿ ಕೊರೆಸಲು ಕೂಡ ತುಮಕೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.