ತುಮಕೂರು: ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ಆರಂಭಿಸಿದ ಸಂದರ್ಭದಲ್ಲಿ ಸ್ವಲ್ಪ ಸಂಕೋಚ ಮತ್ತು ಗೊಂದಲವಿತ್ತು. ಜನವರಿ 15ರಂದು ಆರಂಭವಾದ ಪಾದಯಾತ್ರೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆಯೇ ಹೊರತು ಎಲ್ಲಿಯೂ ಕೂಡ ಕಡಿಮೆಯಾಗಿಲ್ಲ ಎಂದು ಕಾಗಿನೆಲೆ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.
ಕಾಗಿನೆಲೆಯಿಂದ ಹೊರಟಿರುವ ಪಾದಯಾತ್ರೆ ಜಿಲ್ಲೆಯ ಶಿರಾ ತಾಲೂಕಿನ ತಾವರೇಕೆರೆ ತಲುಪಿದ ಸಂದರ್ಭದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಪಾದಯಾತ್ರೆಯು ಯಾವ ವ್ಯಕ್ತಿಯನ್ನು ಬಲಪಡಿಸಲು, ವಿರೋಧಿಸಲು ಅಥವಾ ಸಂಘಟನೆಯೊಂದನ್ನು ಬೆಳೆಸಲು ಅಲ್ಲ. ಬದಲಾಗಿ ರಾಜ್ಯದ ಕಟ್ಟಕಡೆಯ ಕುರುಬ ಸಮುದಾಯದ ವ್ಯಕ್ತಿಯೊಬ್ಬನ ಭವಿಷ್ಯದ ದೃಷ್ಠಿಯಿಂದ ನಡೆಯುತ್ತಿರುವ ಎಸ್ಟಿ ಹೋರಾಟವಾಗಿದೆ ಎಂದರು.
ಪಾದಯಾತ್ರೆ ಆರಂಭವಾಗಿ 14ನೇ ದಿನಕ್ಕೆ ಜಿಲ್ಲೆಯನ್ನು ಪ್ರವೇಶಿಸಿದೆ. ಫೆಬ್ರವರಿ 7ರಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮುಂದೆ ತಮ್ಮ ಹೋರಾಟದ ಹಕ್ಕೊತ್ತಾಯಗಳನ್ನು ಮಂಡಿಸಲಿದ್ದೇವೆ ಎಂದು ತಿಳಿಸಿದರು.
ಓದಿ: ನಾಳೆ ವೀರಶೈವ ಸಂಪ್ರದಾಯದಂತೆ ಎಂ.ಸಿ.ಮನಗೂಳಿ ಅಂತ್ಯ ಸಂಸ್ಕಾರ
10 ಲಕ್ಷ ಕುರುಬ ಸಮುದಾಯದವರು ಫೆಬ್ರವರಿ 7ರಂದು ಡೊಳ್ಳು ಬಾರಿಸಿ ಸಂಸತ್ ಭವನವನ್ನು ನಡುಗಿಸಬೇಕೆಂದು ತಿಳಿಸಿದ್ದಾರೆ. 60 ಲಕ್ಷ ಕುರುಬ ಸಮುದಾಯದವರನ್ನು ಎಸ್ಟಿ ಮೀಸಲಾತಿಗೆ ಸೇರಿಸಬೇಕೆಂಬ ಹಕ್ಕೊತ್ತಾಯವನ್ನು ನಾವೆಲ್ಲರೂ ಮಂಡಿಸಬೇಕು ಎಂದು ಹೇಳಿದರು.
ಹೋರಾಟದ ಸಂದರ್ಭದಲ್ಲಿ ಯಾವುದೇ ರೀತಿಯ ದುರ್ಘಟನೆಗಳು, ಅಚಾತುರ್ಯಗಳು ನಡೆಯದಂತೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸೋಣ ಎಂದು ಹೋರಾಟಗಾರರಿಗೆ ಕರೆ ನೀಡಿದರು.