ತುಮಕೂರು: ಶ್ರೀಲಂಕಾದ ಕೊಲಂಬೊದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ರಾಜ್ಯದ ಏಳು ಮಂದಿ ಮೃತಪಟ್ಟಿರುವ ಬಗ್ಗೆ ವಿದೇಶಾಂಗ ಸಚಿವರು ಟ್ವಿಟರ್ನಲ್ಲಿ ದೃಢಪಡಿಸಿದ್ದು, ಅದರಲ್ಲಿ ತುಮಕೂರಿನ ಸರಸ್ವತಿ ಪುರಂ ಬಡಾವಣೆಯಲ್ಲಿ ವಾಸವಾಗಿದ್ದ ಲಕ್ಷ್ಮೆಗೌಡ ರಮೇಶ್ ಕೂಡ ಒಬ್ಬರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋ.ನ ವಂಶಿ ಕೃಷ್ಣ ಹೇಳಿದ್ದಾರೆ.
ಲಕ್ಷ್ಮೆಗೌಡ ರಮೇಶ್ ಕುಣಿಗಲ್ನವರಾಗಿದ್ದು, ಲಿಕ್ಕರ್ ಉದ್ಯಮಿ ಎಂದು ತಿಳಿದುಬಂದಿದೆ. ಅವರು, ನೆಲಮಂಗಲದ ಸ್ನೇಹಿತರ ಜೊತೆ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಈ ದುರ್ಘಟನೆಗೆ ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದರು.
ಇನ್ನೂ ಮೃತದೇಹ ಬರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ. ಚೀಫ್ ಎಫ್ಆರ್ಒ ಆಫೀಸರ್ಗಳ ಮುಖಾಂತರ ಮಾಹಿತಿ ಪಡೆಯಬೇಕಿದೆ. ಸದ್ಯ ಐಜಿ ಕಚೇರಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಲ್ಲಾ ಪ್ರೊಸಿಜರ್ ಮುಗಿದ ಬಳಿಕ ಮೃತದೇಹ ತರಲಾಗುತ್ತೆ. ಆ ಸಂಧರ್ಭದಲ್ಲಿ ಪೊಲೀಸ್ ಭದ್ರತೆ ನೀಡುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಬೆಂಗಳೂರಿನಿಂದ ಹಿರಿಯ ಪೊಲೀಸ್ ಅಧಿಕಾರಿಗಳ ಕರೆ ಮೇರೆಗೆ ಕೆಲ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ರಮೇಶ್ ಗೌಡ ಸಹೋದರ ಪ್ರಕಾಶ್ ತಿಳಿಸಿದ್ದಾರೆ.
ರಮೇಶ್ ಗೌಡ ಮನೆಗೆ ಪೊಲೀಸ್ ಅಧಿಕಾರಿಗಳು ಭೇಟಿ:
ಬಾಂಬ್ ಬ್ಲಾಸ್ಟ್ನಲ್ಲಿ ರಮೇಶ್ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ತುಮಕೂರಿನ ಸರಸ್ವತಿಪುರಂನಲ್ಲಿರುವ ಅವರ ಮನೆಗೆ ಡಿವೈಎಸ್ಪಿ ತಿಪ್ಪೇಸ್ವಾಮಿ ಭೇಟಿ ನೀಡಿ ಕುಟುಂಬದ ಮಾಹಿತಿ ಕಲೆ ಹಾಕಿದರು.