ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪಟ್ಟಣದಲ್ಲಿ ವೃತ್ತಕ್ಕೆ ನಾಮಕರಣ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲ ನಿವಾರಿಸಲು ಕರೆಯಲಾಗಿದ್ದ ಶಾಂತಿಸಭೆ ವಿಫಲವಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈಶ್ವರಾನಂದ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಸಿಕೃಷ್ಣ ಭಾಗಿಯಾಗಿದ್ದರು. ಹುಳಿಯಾರಿನ ವೃತಕ್ಕೆ ಅಳವಡಿಸಲಾಗಿದ್ದ ಕನಕದಾಸ ಹೆಸರಿನ ನಾಮಫಲಕ ತೆರವುಗೊಳಿಸಲಾಗಿತ್ತು. ಇದರಿಂದ ಕುರುಬ ಸಮುದಾಯದವರಲ್ಲಿ ಅಸಮಾಧಾನ ಮನೆ ಮಾಡಿತ್ತು. ಇನ್ನೊಂದೆಡೆ ಸಭೆಯಲ್ಲಿ ಲಿಂಗಾಯತ ಸಮುದಾಯದವರು ಶ್ರೀ ಶಿವಕುಮಾರ ಸ್ವಾಮೀಜಿ ಹೆಸರು ಇಡುವಂತೆ ಆಗ್ರಹಿಸಿದರು. ಒಂದು ಹಂತದಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿಯ ಅನುಮತಿ ಮೇರೆಗೆ ನಾಮಫಲಕ ಇರಿಸುವಂತೆ ಸಚಿವ ಮಾಧುಸ್ವಾಮಿ ಸಲಹೆ ನೀಡಿದರು. ಈ ನಿಲುವಿಗೆ ವಿರೋಧ ವ್ಯಕ್ತಪಡಿಸಿದ ಈಶ್ವರಾನಂದ ಸ್ವಾಮೀಜಿ, ಕನಕದಾಸರ ಹೆಸರು ಇಡದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಸಭೆಯಲ್ಲಿ ಕುರುಬ ಸಮುದಾಯದ ಸ್ವಾಮೀಜಿಗೆ ಅವಮಾನವಾಗಿದೆ ಎಂದು ಆಕ್ರೋಶ ಹೊರಹಾಕಿದರು. ಸ್ಥಳದಲ್ಲಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಸಿಕೃಷ್ಣ ಸಭೆಯಲ್ಲಿದ್ದವರನ್ನು ಸಮಾಧಾನಪಡಿಸಿದರು.