ತುಮಕೂರು: ಜಗತ್ತಿನಲ್ಲಿ ಅನೇಕ ಹೊಸ ಸಸ್ಯ ಪ್ರಬೇಧಗಳು ಪತ್ತೆಯಾಗುತ್ತಲೇ ಇರುತ್ತವೆ. ಅಂತಹವುಗಳಲ್ಲಿ ತುಮಕೂರು ಜಿಲ್ಲೆಯಲ್ಲಿಯೂ ಹೊಸ ಸಸ್ಯ ಪ್ರಬೇಧ ಪತ್ತೆಯಾಗಿದೆ. ಜಿಲ್ಲೆಯ ದೇವರಾಯನದುರ್ಗಾ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿರೋ ಹೊಸ ಸಸ್ಯ ಪ್ರಬೇಧಕ್ಕೆ ‘ಬ್ರ್ಯಾಕಿಸ್ಟೆಲ್ಲಾ ತುಮಕೂರೆನ್ಸ್’ ಎಂದು ಹೆಸರಿಡಲಾಗಿದೆ.
ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೆಟ್ಟಗುಡ್ಡಗಳ ಇಳಿಜಾರಿನ ಒಣ ನೆಲದಲ್ಲಿ ಬೆಳೆಯುವ ಹೊಸ ಪ್ರಬೇಧದ ಸಸ್ಯ ಇದಾಗಿದೆ. ಜಿಲ್ಲೆಯಲ್ಲಿ ಸಕ್ರಿಯವಾಗಿರೋ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಸದಸ್ಯರು ಇದನ್ನು ಪತ್ತೆ ಮಾಡಿದ್ದಾರೆ. ದೇವರಾಯನದುರ್ಗದ ಎಲೆ ಉದುರುವ ಕಾಡಿನಲ್ಲಿ 2017ರ ಜುಲೈ 30ರಂದು ಕ್ಷೇತ್ರ ಅಧ್ಯಯನದ ವೇಳೆ ಈ ಸಸ್ಯ ಪ್ರಬೇಧ ಬೆಳಕಿಗೆ ಬಂದಿದೆ.
ಈ ಸಸ್ಯವು 1 ಮೀಟರ್ ಉದ್ದ ಬೆಳೆಯುತ್ತದೆ. ನೇರವಾಗಿ ಬೆಳೆಯುವ ಇದು ಕೆಲವೊಮ್ಮೆ ಕವಲೊಡೆಯುತ್ತದೆ. ಎಲೆಗಳು ಮೊನಚಾಗಿದ್ದು ಜೋತಾಡುತ್ತವೆ. ಬೇರು ಗೆಡ್ಡೆಯ ರೂಪದಲ್ಲಿ ಭೂಮಿಯೊಳಗಿದ್ದು ಜೂನ್-ಜುಲೈ ತಿಂಗಳಿನಲ್ಲಿ ಮುಂಗಾರು ಮಳೆ ಬಿದ್ದ ಚಿಗುರೊಡೆದು ಹೂ ಬಿಡುತ್ತದೆ. ಹೂ ಮತ್ತು ಎಲೆಗಳ ಭಾರಕ್ಕೆ ಕಾಂಡ ಬಾಗುತ್ತದೆ ಆಗಸ್ಟ್- ಸೆಪ್ಟೆಂಬರ್ ನಲ್ಲಿ ಕಾಯಿ ಬಿಡುತ್ತದೆ. ಮೊದಲಿಗೆ ಈ ಸಸ್ಯ ರಚನೆಗಳ ಅಧ್ಯಯನ ಮಾಡಿ ಬಾಟ್ನಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆಗೆ ವರದಿ ಕಳುಹಿಸಲಾಗಿತ್ತು.
ಭಾರತದಲ್ಲಿ ಸಿಗುವ 33 ಬ್ರ್ಯಾಕಿಸ್ಟೆಲ್ಲಾ ಪ್ರಬೇಧಗಳ ಪೈಕಿ ಕರ್ನಾಟಕದಲ್ಲಿ 7 ಪ್ರಬೇಧಗಳಿವೆ. ಈ ಎಲ್ಲಾ ಪ್ರಬೇಧಗಳಿಗಿಂತ ವಿಶೇಷ ಲಕ್ಷಣಗಳು ಬ್ರ್ಯಾಕಿಸ್ಟೆಲ್ಲಾ ತುಮಕೂರೆನ್ಸ್ ಪ್ರಬೇಧದಲ್ಲಿರುವುದು ಬೆಳಕಿಗೆ ಬಂದಿದೆ. ಒಟ್ಟಾರೆ ಆಹಾರ ಜಾಲದಲ್ಲಿ ಈ ಸಸ್ಯಕ್ಕೆ ತನ್ನದೇ ಆದ ಪಾತ್ರ ಹೊಂದಿದೆ.
ಇದನ್ನೂ ಓದಿ: ಅನುದಾನ ಸದ್ಬಳಕೆಯಲ್ಲಿ ತುಮಕೂರು ರಾಜ್ಯದಲ್ಲಿಯೇ ಪ್ರಥಮ: ಸಚಿವ ಡಾ. ನಾರಾಯಣ ಗೌಡ ಮೆಚ್ಚುಗೆ