ಮೈಸೂರು: ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಸ್ಥಾಪನೆಗೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಕ್ಯಾಂಪಸ್ನಲ್ಲಿ 4.2 ಎಕರೆ ಜಾಗ ನೀಡಲು ಸಿಂಡಿಕೇಟ್ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಮಾನಸ ಗಂಗೋತ್ರಿ ಆವರಣದ ಪಂಪ್ ಹೌಸ್ ಎದುರಿರುವ (ಸಂಸ್ಕೃತ ಅಧ್ಯಯನ ವಿಭಾಗದ ಹಿಂಭಾಗ) 4.2 ಎಕರೆ ಸ್ಥಳ ನೀಡಲು ಒಪ್ಪಿಗೆ ದೊರತಿದ್ದು, ಶೀಘ್ರದಲ್ಲೇ ಸ್ಥಳ ಹಸ್ತಾಂತರವಾಗಲಿದೆ. ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಪ್ರಸ್ತುತ ಸಿ.ಐ.ಐ.ಎಲ್.ನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಂತರ ಕೆಲವು ದಿನಗಳ ಹಿಂದೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೇಂದ್ರ ಸ್ಥಾಪನೆಗೆ ಚಿಂತಿಸಲಾಗಿತ್ತು. ಈಗ ಗಂಗೋತ್ರಿ ಆವರಣದಲ್ಲಿಯೇ ಸ್ಥಳ ನೀಡಲಾಗಿದೆ. ಇದಕ್ಕೆ ಕೇಂದ್ರದ ನೂತನ ಯೋಜನೆ ನಿರ್ದೇಶಕ ಬಿ. ಶಿವರಾಮ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಸ್ಥಾಪನೆಗೆ ಹಾಗೂ ಬೆಳವಣಿಗೆಗೆ ಪೂರಕವಾಗಿ ಮೈಸೂರು ವಿಶ್ವವಿದ್ಯಾನಿಲಯ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ತಿಳಿಸಿದ್ದಾರೆ.