ಶಿವಮೊಗ್ಗ : ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಬೇರೆ ಬೇರೆ ಸ್ಥಳಗಳಿಂದ ಜಿಲ್ಲೆಗೆ ಬಂದಿರುವವರನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಹಾಸ್ಟೆಲ್ಗಳ ಮೊರೆ ಹೋಗಿದೆ. ಆದರೆ, ಇವರನ್ನು ಹಾಸ್ಟೆಲ್ಗಳಲ್ಲಿ ಕ್ವಾರಂಟೈನ್ ಮಾಡಲು ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಭದ್ರಾವತಿ ತಾಲೂಕಿನ ಹೊಳೆಹೊನ್ನೂರು, ಬಸವನಗುಡಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಹಾಸ್ಟೆಲ್ ಇರುವ ಗ್ರಾಮಸ್ಥರು ಕ್ವಾರೆಂಟೈನ್ ಮಾಡುವುದರಿಂದ ನಮಗೂ ಸೋಂಕು ಬರಬಹುದು ಎನ್ನುವ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ಗ್ರಾಮಸ್ಥರು ಗ್ರಾಮದ ಮುಖ್ಯ ರಸ್ತೆಗೆ ಮಣ್ಣು ಹಾಕಿ ಬಂದ್ ಮಾಡಿದ್ದಾರೆ.
ತಮಿಳುನಾಡಿನಿಂದ ಸುಮಾರು 60 ಜನ ಆಗಮಿಸಿದ್ದು, ಅವರನ್ನು ಕ್ವಾರಂಟೈನ್ ಮಾಡುವ ಉದ್ದೇಶದಿಂದಾಗಿ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ಗಳನ್ನು ಸ್ವಚ್ಷಗೊಳಿಸಲು ತಿಳಿಸಿದ್ದರು. ಈ ವೇಳೆ, ವಿಷಯ ತಿಳಿದ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ, ಇದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ.