ಶಿವಮೊಗ್ಗ: ಅರಣ್ಯ ಇಲಾಖೆಯವರು ನೆಟ್ಟ ಗಿಡಗಳ ರಕ್ಷಣೆಗೆ ಇಟ್ಟಿದ್ದ ಟಿಮಿಟ್ ತಿಂದು ನಾಲ್ಕು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಕಾರೆಕುಂಬ್ರಿ ಗ್ರಾಮದಲ್ಲಿ ನಡೆದಿದೆ.
ಕಾರೆಕುಂಬ್ರಿ ಗ್ರಾಮದ ಸುಧಾಕರ್ ಅವರಿಗೆ ಸೇರಿದ ಜಾನುವಾರುಗಳು. ನಿನ್ನೆ ಮೇಯಲು ಹೋಗಿ ವಾಪಸ್ ಬಂದು ಮಲಗಿದ್ದವು. ಬೆಳಗ್ಗೆ ಅಸ್ವಸ್ಥಗೊಂಡು ಸಾವನ್ನಪ್ಪಿವೆ. ವಾರದ ಹಿಂದೆ ಆಗುಂಬೆ ವಲಯದ ಅರಣ್ಯಾಧಿಕಾರಿಗಳು ಕಾರೆಕುಂಬ್ರಿ ಗ್ರಾಮದ ಬಳಿ ಬಿದಿರು ಗಿಡಗಳನ್ನು ನೆಟ್ಟಿದ್ದರು. ಅವುಗಳ ರಕ್ಷಣೆಗೆ ಸಸ್ಯಗಳ ಬುಡದಲ್ಲಿ ಟಿಮಿಟ್ ಎಂಬ ವಿಷಕಾರಿ ಔಷಧ ಇಡಲಾಗಿತ್ತು.

ಔಷಧ ಇಟ್ಟಿದ್ದಕ್ಕೆ ಗ್ರಾಮಸ್ಥರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಒಂದು ಭಾಗದಲ್ಲಿಟ್ಟಿದ್ದ ಟಿಮಿಟ್ ಅನ್ನು ಮಾತ್ರ ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಉಳಿದ ಕಡೆ ಹಾಗೆಯೇ ಬಿಟ್ಟಿದ್ದಾರೆ. ಮೇಯಲು ಅರಣ್ಯಕ್ಕೆ ಹೋದ ಜಾನುವಾರುಗಳು ತಿಂದು ಸಾವನ್ನಪ್ಪಿವೆ.
ಮಳೆ ಬರುತ್ತಿರುವುದರಿಂದ ಟಿಮಿಟ್ ಔಷಧ ಕರಗಿ ಹಳ್ಳ-ನದಿಗೆ ಸೇರುತ್ತಿದೆ. ಇದೇ ನೀರು ಮನೆಯ ಬಾವಿಗಳಿಗೆ ಸೇರುತ್ತಿದೆ. ಇದರಿಂದ ಗ್ರಾಮಸ್ಥರ ಜೀವಕ್ಕೂ ಕಂಟಕವಾಗುತ್ತಿದೆ. ಅರಣ್ಯ ಇಲಾಖೆಯ ಬೇಜವಾಬ್ದಾರಿಯಿಂದ ಇನ್ನಷ್ಟು ಪ್ರಾಣಗಳಿಗೆ ಸಂಚಕಾರ ಎದುರಾಗುವ ಸಾಧ್ಯತೆ ಇದೆ. ಕೂಡಲೇ ಅವುಗಳನ್ನು ತೆರವುಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.