ಶಿವಮೊಗ್ಗ : ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ನಲ್ಲಿ ರಾಜ್ಯಮಟ್ಟದ ಪ್ರಾಜೆಕ್ಟ್ಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಐಇಇಇ ಬೆಂಗಳೂರು ಪ್ರಾಯೋಜಕತ್ವದಲ್ಲಿ ನಡೆದ ಐದನೇ ಇಂಡಸ್ಟ್ರಿ ಇನ್ಸ್ಟಿಟ್ಯೂಟ್ ಕಾನ್ಕ್ಲೇವ್ ಆನ್ ಎಲೆಕ್ಟ್ರಾನಿಕ್ಸ್, ಕಂಪ್ಯೂಟಿಂಗ್ ಆ್ಯಂಡ್ ಕಮ್ಯೂನಿಕೇಶನ್ ಟೆಕ್ನಾಲಜೀಸ್ ಕಾರ್ಯಕ್ರಮದಲ್ಲಿ ತಜ್ಞರಿಂದ ಉಪನ್ಯಾಸ ನಡೆಯಿತು.
ತಾಂತ್ರಿಕ ಕಾರ್ಯಾಗಾರದಲ್ಲಿ ಕೈಗಾರಿಕೆಯ ಮುಂದಿರುವ ಸವಾಲುಗಳು, ಇತ್ತೀಚಿನ ಬೆಳವಣಿಗೆ, ನೂತನ ತಂತ್ರಜ್ಞಾನ ಆವಿಷ್ಕಾರ ಹಾಗೂ ಇಂಜಿನಿಯರ್ಗಳ ಸಾಧನೆ ಕುರಿತಾದ ಪ್ರಬಂಧಗಳನ್ನು ಮಂಡಿಸಲಾಯಿತು. ರಾಜ್ಯದ ವಿವಿಧ ಕಾಲೇಜುಗಳ ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಇಸಿ, ಸಿಎಸ್ ವಿಭಾಗದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕೃಷಿ ಸಾಮಗ್ರಿ ಮತ್ತು ಕೃಷಿ ಸಾಲ ಪಡೆಯಲು ಅನುಕೂಲಗವಾಗುವಂತಹ ಆಪ್ಟಿಕಲ್ ಕ್ಯಾರೆಕ್ಟರ್ ರಿಕಗ್ನೇಷನ್, ಬಯೋಮೆಟ್ರಿಕ್ ವ್ಯವಸ್ಥೆಯಿಂದ ವಾಹನ ಚಾಲನೆ, ಮಹಿಳಾ ಭದ್ರತೆ ಖಾತರಿ ಪಡಿಸುವ ಭದ್ರತಾ ವ್ಯವಸ್ಥೆ, ಪ್ರಾಣಿಗಳ ಆರೋಗ್ಯ ಸಂರಕ್ಷಣೆ, ತ್ಯಾಜ್ಯ ವಿಲೇವಾರಿ, ಆಟೋಮೆಟಿಕ್ ಸಿರ್ಟಿಂಗ್ ಯಂತ್ರ, ಐಒಟಿ ಆಧಾರಿತ ಸ್ಮಾರ್ಟ್ ವಾಶ್ ರೂಂ, ಥರ್ಮೋ ಎಲೆಕ್ಟ್ರಿಕಲ್ ಹೆಲ್ಮೆಟ್ ಕೂಲರ್, ಅಡಕೆ ಹಾಳೆಯಿಂದ ಪ್ಲೈವುಡ್, ಮಣ್ಣಿನ ಸಾಂದ್ರತೆ ಪರೀಕ್ಷಿಸುವ ಮೊಬೈಲ್ ಪ್, ವಾಯುಮಾಲಿನ್ಯ ರಹಿತ ಸ್ಮಾರ್ಟ್ ಅಡುಗೆ ಯಂತ್ರ, ಅಪಘಾತಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವ ಅಡ್ವಾನ್ಸಡ್ ವೆಹಿಕಲ್ ಮಾನಿಟರಿಂಗ್ ಸಿಸ್ಟಂ, ಸ್ಮಾರ್ಟ್ ವ್ಹೀಲ್ ಚೇರ್ , ಗಾಳಿಯಿಂದ ಚಾಲನೆ ಆಗುವ ಯಂತ್ರ, ಘನ ತಾಜ್ಯ ವಿಂಗಡನೆ ಮಾಡುವ ಯಂತ್ರ, ಹೀಗೆ ವಿವಿಧ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದರು.
ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕಾಗಿ ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಕಾರ್ಯಕ್ರಮಕ್ಕೆ ಕಾಲೇಜಿನ ಆಡಳಿತ ಮಂಡಳಿ ಖಜಾಂಚಿ ಎಸ್.ವೈ. ಅರುಣಾದೇವಿ ಚಾಲನೆ ನೀಡಿದರು. ಬೆಂಗಳೂರಿನ ಐಇಇಇ ಕಾರ್ಯದರ್ಶಿ ಎಸ್.ರಾಜಶೇಖರ್, ಐಇಇಇ ಮಂಗಳೂರಿನ ಮುಖ್ಯಸ್ಥ ಡಾ. ಮನೋಹರ್ ಪೈ, ರಜತ್ ದುಗ್ಗಲ್, ಡಾ.ಚೈತನ್ಯ ಕುಮಾರ್, ಡಾ.ಜಗದೀಶ್, ಡಾ. ಲೈಕ್ವಿನ್ ಥಾಮಸ್, ಡಾ. ಪ್ರಸನ್ನಕುಮಾರ್ ಇತರರು ಪಾಲ್ಗೊಂಡಿದ್ದರು.