ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಭದ್ರಾವತಿಯ ಅಕ್ಕಸಾಲಿಗ ರವಿಚಂದ್ರ ರವರು ತಮ್ಮ ಕೈಯಲ್ಲಿಯೇ ಅಕ್ಕಿ ಕಾಳಿಕ್ಕಿಂತ ಸಣ್ಣದಾದ ಮೋದಿರವರ ಚಿನ್ನದ ಕಲಾಕೃತಿಯನ್ನು ರಚಿಸಿದ್ದಾರೆ.
ರವಿಚಂದ್ರ ಅವರು 20 ಮಿ.ಗ್ರಾಂ ಬಂಗಾರದಲ್ಲಿ 3.75 ಮಿಲಿ ಮೀಟರ್ ಎತ್ತರದ , 3 ಮಿ.ಮಿ ಅಗಲದ ಪ್ರಧಾನಿ ಮೋದಿರವರ ಕಲಾಕೃತಿಯನ್ನು ರಚನೆ ಮಾಡಿದ್ದಾರೆ. ಪ್ರದಾನಿ ಮೋದಿ ಅವರ ಜನ್ಮದಿನದ ಅಂಗವಾಗಿ ಇದನ್ನು ರಚಿಸಲಾಗಿದೆ ಎನ್ನುತ್ತಾರೆ ಕಲಾಕೃತಿಯ ರಚನೆ ಮಾಡಿದ ರವಿಚಂದ್ರ.
ಲಾಕ್ಡೌನ್ ಸಂದರ್ಭವನ್ನು ಸದುಪಯೋಗ ಪಡಿಸಿಕೊಂಡು ಪ್ರತಿ ದಿನ 2 ಗಂಟೆಗಳ ಕಾಲ ಇದರ ತಯಾರಿಗೆ ಮೀಸಲಿಟ್ಟು, ರಚನೆ ಮಾಡಿದ್ದಾರೆ. ಈ ಹಿಂದೆ ಮೆಕ್ಕಾ ಮದೀನ, ವಿಶ್ವಕರ್ಮ ಕಲಾಕೃತಿ, ಕ್ರಿಸ್ಮಸ್ಗಾಗಿ ಬಂಗಾರದ ಏಸುಕ್ರಿಸ್ತನನ್ನು ರಚನೆ ಮಾಡಿದ್ದಾರೆ.
ಅಕ್ಕಸಾಲಿಗ ರವಿಚಂದ್ರ ಅವರು ಸೂಕ್ಷ್ಮ ಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ. ಅಕ್ಕಸಾಲಿಗರಾಗಿದ್ದು, ತಮ್ಮ ಕೈಯಲ್ಲಿ ಹಲವು ಬಂಗಾರದ ಆಭರಣಗಳನ್ನು ರಚನೆ ಮಾಡುವ ಇವರು ತಮ್ಮ ಬಿಡುವಿನ ಅವಧಿಯಲ್ಲಿ ಈ ರೀತಿಯ ಸೂಕ್ಷ್ಮ ಕಲಾಕೃತಿಯನ್ನು (ಮೈಕ್ರೋ ಆರ್ಟ್ಸ್) ರಚನೆ ಮಾಡುತ್ತಿದ್ದಾರೆ. ಈಗಾಗಲೇ ಸಿಎಂ ಯಡಿಯೂರಪ್ಪನವರಿಗೆ ಮೋದಿ ರವರ ಕಲಾಕೃತಿಯನ್ನು ತೋರಿಸಿರುವ ಇವರು, ತಾವೇ ಸ್ವತಃ ಪ್ರಧಾನಿ ನರೇಂದ್ರ ಮೋದಿರವರನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ.