ಶಿವಮೊಗ್ಗ: ಫೆ.13ರ ಬದಲಿಗೆ 12ಕ್ಕೆ ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಲು ಸಿದ್ಧ ಎಂದು ಸಾಗರ ಶಾಸಕ ಹಾಗೂ ಎಂಎಸ್ಐಎಲ್ನ ಅಧ್ಯಕ್ಷರಾದ ಹರತಾಳು ಹಾಲಪ್ಪ ತಿಳಿಸಿದ್ದಾರೆ.
ಸಾಗರ ತಾಲೂಕಿನಲ್ಲಿ ನಡೆಯುತ್ತಿರುವ ಮರಳಿನ ವ್ಯವಹಾರದಲ್ಲಿ ನಾನಾಗಲಿ, ನಮ್ಮ ಕುಟುಂಬದವರಾಗಲಿ ಯಾರೂ ಹಣ ಪಡೆದಿಲ್ಲ. ಈ ಸಂಬಂಧ ನಾನು ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಹಾಕಿದ ಸವಾಲಿಗೆ ಮೊನ್ನೆ ಶಾಸಕರು ಉತ್ತರ ನೀಡಿದ್ದರು. ಈ ಪ್ರಮಾಣವನ್ನು ಫೆಬ್ರವರಿ 13ರಂದು ಮಾಡಲು ಸಿದ್ಧನಿದ್ದೇನೆ ಎಂದಿದ್ದರು.
ಆದರೆ, ಇಂದು ಫೆಬ್ರವರಿ 13ರಂದು ನಮ್ಮ ಮನೆಯಲ್ಲಿ ಮದುವೆ ಕಾರ್ಯಕ್ರಮ ಇರುವುದರಿಂದ ನಾನು ಫೆಬ್ರವರಿ 12ಕ್ಕೆ ಧರ್ಮಸ್ಥಳಕ್ಕೆ ಹೋಗಿ ಪ್ರಮಾಣ ಮಾಡಲು ಸಿದ್ಧವಾಗಿದ್ದೇನೆ. ಅಂದೇ ನಮ್ಮ ಮೇಲೆ ಆರೋಪ ಮಾಡಿದವರು ಸಹ ಬರಬೇಕು ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್, ಶಾಲು ಹಾಕೊಂಡ್ ಬಂದ್ರೆ ನೋ ಎಂಟ್ರಿ.. ಕೋರ್ಟ್ ತೀರ್ಪು ಬರೋವರೆಗೂ ಸಮವಸ್ತ್ರ ಧರಿಸಿಯೇ ಬರಬೇಕು: ಶಿಕ್ಷಣ ಸಚಿವ
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದೇನು ?: ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕೆಲ ದಿನಗಳ ಹಿಂದೆ ಸಾಗರ ಶಾಸಕರು ಮರಳು ದಂಧೆ ನಡೆಸುವ ಲಾರಿ ಮಾಲೀಕರಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಸಾಗರ ತಾಲೂಕು ಮರಳು ಲಾರಿ ಮಾಲೀಕರ ಸಂಘದವರು ಶಾಸಕ ಹಾಲಪ್ಪನವರು ನಮ್ಮಿಂದ ಯಾವುದೇ ಹಣ ಪಡೆದಿಲ್ಲ. ನಾವು ಹಣ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದಾದ ನಂತರ ಬೇಳೂರು ಗೋಪಾಲಕೃಷ್ಣ ಅವರು ಶಾಸಕ ಹಾಲಪ್ಪ ಹಣ ಪಡೆದಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುವಂತೆ ಒತ್ತಾಯಿಸಿದ್ದರು.