ಶಿವಮೊಗ್ಗ: ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿ ರಾಜ್ಯವೇ ತಲೆ ತಗ್ಗಿಸುವಂಥದ್ದು, ಇದು ಗೂಂಡಾಗಳ ಕೃತ್ಯವಾಗಿದೆ. ಕಾಂಗ್ರೆಸ್ ಬೆಂಬಲದಿಂದಲೇ ಈ ಕೃತ್ಯ ನಡೆಸಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಅಖಂಡ ಶ್ರೀನಿವಾಸಮೂರ್ತಿಯವರ ಮನೆ ನಡೆದ ದಾಳಿಯು ವ್ಯವಸ್ಥಿತವಾದ ಒಂದು ಸಂಚು. ಒಂದು ಕ್ಷುಲ್ಲಕ ಕಾರಣಕ್ಕೆ ಈ ಘಟನೆ ನಡೆದಿದೆ. ಶಾಸಕರ ಮನೆ, ಕಚೇರಿಗೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದರು. ಮತಾಂಧರ ಕೃತ್ಯವನ್ನು ಒಳ್ಳೆಯ ಮುಸಲ್ಮಾನರು ಖಂಡಿಸಬೇಕಿದೆ. ಈ ಮೂಲಕ ನಾವು ಮುಖ್ಯ ವಾಹಿನಿಯ ಜೊತೆಗಿದ್ದೇವೆ, ಗೂಂಡಾಗಳ ಜೊತೆಗೆ ಇಲ್ಲ ಎಂದು ಹೇಳಬೇಕಿದೆ. ಸುಮ್ಮನೆ ಇದ್ದರೆ ಎಲ್ಲಾ ಮುಸಲ್ಮಾನರು ಮತಾಂಧರ ಜೊತೆಗಿದ್ದಾರೆ ಅಂದುಕೊಳ್ಳುತ್ತಾರೆ ಎಂದರು.
ಡಿಕೆಶಿ, ಸಿದ್ದು ವಿರುದ್ದ ವಾಗ್ದಾಳಿ :
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ ಇರುವುದು ನೋಡಿದ್ರೆ, ಮತಾಂಧರಿಗೆ ಕಾಂಗ್ರೆಸ್ ಬೆಂಬಲವಿದೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದು ಅಖಂಡ ಶ್ರೀನಿವಾಸ್ ಮೂರ್ತಿಯವರ ಮನೆ ಮೇಲೆ ನಡೆದ ದಾಳಿ, ನಾಳೆ ನಮ್ಮ ಮನೆ ಮೇಲೂ ನಡೆಯಬಹುದು. ಹೀಗೆ ಕಲ್ಲು, ಮಚ್ಚು ತೆಗೆದುಕೊಂಡು ಬಂದು ಹಲ್ಲೆ ನಡೆಸಿದಾಗ ನಿಮಗೆ ಗೊತ್ತಾಗುತ್ತದೆ ಎಂದು ಡಿಕೆಶಿ ವಿರುದ್ಧ ಹರಿಹಾಯ್ದರು.
ನಾನು ಮೊನ್ನೆ ಮಥುರಾ ಹಾಗೂ ಕಾಶಿಯ ಬಗ್ಗೆ ಹೇಳಿಕೆ ನೀಡಿದ ಅರ್ಧ ಗಂಟೆಯಲ್ಲಿ ಪ್ರತಿಕ್ರಿಯೆ ನೀಡಿದ ಡಿ.ಕೆ.ಶಿವಕುಮಾರ್, ಇಂದು ಯಾಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಟ್ವೀಟ್ ಕುರಿತು ಪ್ರತಿಕ್ರಿಯಿಸಿ, ಈ ರೀತಿಯ ಘಟನೆ ಹಿಂದೂಪರ ಸಂಘಟನೆಗಳಿಂದ ಆಗಿದ್ದರೆ ಸಿದ್ದರಾಮಯ್ಯ ಹೀಗೆ ಟ್ವೀಟ್ ಮಾಡ್ತಿದ್ರಾ ಎಂದರು.
ನಿನ್ನೆ ಶ್ರೀನಿವಾಸ್ ಮೂರ್ತಿಯವರು ಮನೆಯಲ್ಲಿ ಇದ್ದಿದ್ರೆ ಕೊಲೆಯೇ ಆಗ್ತಿತ್ತು. ಪೊಲೀಸ್ ಹಾಗೂ ಪತ್ರಕರ್ತರ ಮೇಲೆ ಕೂಡ ಹಲ್ಲೆ ನಡೆಸಲಾಗಿದೆ. ನಮ್ಮ ದೇಶದಲ್ಲಿ ಉಗ್ರಗಾಮಿಗಳನ್ನೇ ಮಟ್ಟ ಹಾಕಲಾಗಿದೆ. ಇನ್ನು ಎಸ್ಡಿಪಿಐ ಹಾಗೂ ಪಿಎಫ್ಐಗಳು ಜುಜುಬಿ ಎಂದರು.