ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯ ಹೊರವಲಯದಲ್ಲಿರುವ ಮಿಲಿಟರಿ ಕ್ಯಾಂಪ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಿಪ್ರ ಕಾರ್ಯಪಡೆ ಘಟಕಕ್ಕೆ ಅಡಿಪಾಯ ಹಾಕಿದರು. ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ, ಪ್ರಹ್ಲಾದ ಜೋಶಿ, ಸಂಸದ ಬಿ.ವೈ.ರಾಘವೇಂದ್ರ ಭಾಗಿಯಾಗಿದ್ದರು.
ಆರ್ಎಎಫ್ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾನು ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಆರ್ಎಎಫ್ ಸ್ಥಾಪನೆಗೆ ನನಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಪತ್ರ ಬರೆದಿದ್ದರು. ನೀವು ಇಲ್ಲಿ ಆರ್ಎಎಫ್ ಘಟನಕ ಸ್ಥಾಪನೆಗೆಗ ಒಪ್ಪಿಗೆ ನೀಡಿದರೆ ನಾವು ರಾಜ್ಯ ಸರ್ಕಾರದಿಂದ ಜಾಗ ನೀಡುವುದಾಗಿ ತಿಳಿಸಿದ್ದರು. 50 ಎಕರೆ ಪ್ರದೇಶದಲ್ಲಿ ಆರ್ಎಎಫ್ ಘಟಕ ಸ್ಥಾಪನೆಯಾಗಲಿದೆ. 1,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. 97 ನೇ ಆರ್ಎಎಫ್ ಬೆಟಾಲಿಯನ್ ಇದಾಗಿದ್ದು, 4 ರಾಜ್ಯಗಳ ವ್ಯಾಪ್ತಿಯಲ್ಲಿ 39 ಜಿಲ್ಲೆಗಳನ್ನು ಒಳಗೊಳ್ಳಲಿದೆ. ಭೂಮಿ ನೀಡಿದ್ದಕ್ಕೆ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದರು.
ಉತ್ತಮವಾಗಿ ಕೊರೊನಾ ನಿಭಾಯಿಸಿದ್ದೇವೆ: ಮೋದಿ ದೂರ ದೃಷ್ಟಿಯಿಂದ ಕೊರೊನಾ ವಿರುದ್ಧ ಸಮರ್ಥವಾಗಿ ಹೋರಾಡಿದ್ದೇವೆ. ವಿಶ್ವದಲ್ಲಿ ನಾವು ಉತ್ತಮವಾಗಿ ಕೊರೊನಾ ನಿಭಾಯಿಸಿದ್ದೇವೆ. ಮೋದಿ ದಿವ್ಯ ದೃಷ್ಟಿ ಕಾರಣದಿಂದ ಯಶಸ್ಸು ಕಂಡಿದ್ದೇವೆ ಎಂದು ಹೇಳಿದರು.
ವ್ಯಾಕ್ಸಿನ್ ವಿಚಾರದಲ್ಲಿ ರಾಜಕೀಯ ಸಹಿಸಲ್ಲ: ದೇಶಾದ್ಯಂತ ಇಂದು ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಕೊರೊನಾ ಲಸಿಕೆ ವಿಚಾರದಲ್ಲಿ ರಾಜಕೀಯ ನಡೆಯುತ್ತಿದೆ. ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ಈ ರೀತಿ ರಾಜಕೀಯ ಮಾಡಿದರೆ ನಾವು ಸಹಿಸಲ್ಲ. ದೇಶದ ಜನರಿಗೆ ಪಿಎಂ ಮೋದಿ ನಾಯಕತ್ವದ ಬಗ್ಗೆ ಗೊತ್ತಿದೆ ಎಂದರು.
ಸಿಆರ್ಪಿಎಫ್ ನಮ್ಮ ಶಕ್ತಿ: ಸಿಆರ್ಪಿಎಫ್ ನಮ್ಮ ಶಕ್ತಿಯಾಗಿದೆ. ದೇಶದ ಮೂಲೆ ಮೂಲೆಗೆ ಸಿಆರ್ಪಿಎಫ್ ಹೋಗುತ್ತದೆ. ಯಾವುದೇ ಅಹಿತಕರ ಘಟನೆ ನಡೆದರೂ ಮೊದಲು ಆ ಜಾಗಕ್ಕೆ ಸಿಆರ್ಪಿಎಫ್ ಹೋಗುತ್ತದೆ ಎಂದು ಹೇಳಿದರು.
ದೆಹಲಿಗೆ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿ: ಪ್ರತಿಯೊಬ್ಬರು ದೆಹಲಿಗೆ ಹೋದಾಗ ತಪ್ಪದೇ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿ. 5 ನಿಮಿಷ ಹುತಾತ್ಮ ಪೊಲೀರಿಗೆ ಶ್ರದ್ಧಾಂಜಲಿ ಸಲ್ಲಿಸಿ ಎಂದು ನಾನು ಕರ್ನಾಟಕದ ಜನತೆಗೆ ಮನವಿ ಮಾಡಿದರು.
ಪೊಲೀಸ್ ಕೆಲಸ ಕಠಿಣ ಕೆಲಸ: ಸರ್ಕಾರಿ ಕೆಲಸಗಳ ಪೈಕಿ ಪೊಲೀಸ್ ಕೆಲಸ ಅತ್ಯಂತ ಕಠಿಣ ಕೆಲಸವಾಗಿದೆ. ಪೊಲೀಸರನ್ನು ನಾವು ಬೇರೆ ದೃಷ್ಟಿಯಿಂದ ನೋಡುತ್ತೇವೆ. ಅವರಿಗೆ ಸಮಯದ ಮಿತಿಯಿಲ್ಲ. ಅವರು ಕಠಿಣ ಪರಿಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಾರೆ. ಅವರನ್ನು ನೊಡುವ ದೃಷ್ಟಿಕೋನ ಬದಲಾಗಬೇಕು ಎಂದರು.
ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ: ಇನ್ನು ಮುಂದೆ ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರದಲ್ಲಿ ಸ್ವದೇಶಿ ವಸ್ತುಗಳು ಮಾತ್ರ ಸಿಗುತ್ತವೆ. ಲೋಕಲ್ ಫಾರ್ ವೋಕಲ್ ಎಂದು ಮೋದಿ ಕರೆ ನೀಡಿದ್ದಾರೆ. ಒಂದು ವೇಳೆ ಭಾರತೀಯರೆಲ್ಲರೂ ನಾವು ದೇಶೀಯ ವಸ್ತುಗಳನ್ನೇ ಬಳಸಿದರೆ ನಮ್ಮ ದೇಶ ಹೊಸ ಇತಿಹಾಸ ಬರೆಯುತ್ತದೆ. ನಾವೆಲ್ಲರೂ ಸ್ವದೇಶಿ ವಸ್ತುಗಳಿಗೆ ಹೆಚ್ಚಾಗಿ ಪ್ರಾಮುಖ್ಯತೆ ನೀಡ ಬೇಕು ಎಂದು ಕರೆ ನೀಡಿದರು.
ರಕ್ಷಣಾ ವಿವಿ ಸ್ಥಾಪನೆ: ರಾಷ್ಟ್ರೀಯ ಫೋರೆನ್ಸಿಕ್ ವಿಶ್ವ ವಿದ್ಯಾಲಯ ಸ್ಥಾಪನೆಗೆ ಒಪ್ಪಿಗೆ ದೊರೆತಿದೆ. ರಕ್ಷಣಾ ವಿಶ್ವ ವಿದ್ಯಾಲಯ ಸ್ಥಾಪನೆಗೂ ಒಪ್ಪಿಗೆ ಸಿಕ್ಕಿದೆ. ಈ ಎರಡೂ ವಿವಿಗಳ ಜತೆ ಕರ್ನಾಟಕ ಸಂಯೋಜನೆ ಮಾಡಿಕೊಳ್ಳಲಿ ಎಂದರು.
ಹುತಾತ್ಮ ಆರ್ಎಎಫ್ ಯೋಧರಿಗೆ ಪರಿಹಾರ: ಆರ್ಎಎಫ್ ಯೋಧರು ಹುತಾತ್ಮರಾದರೆ ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.