ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟದ ಅಧ್ಯಕ್ಷಗಾದಿಗೆ ನಡೆದ ಚುನಾವಣೆ ಅಕ್ರಮವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಆರು ತಿಂಗಳ ಒಳಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೆ ಅಕ್ರಮ ಚುನಾವಣೆಗೆ ಸಹಕರಿಸಿದ ಆರೋಪದ ಮೇರೆಗೆ ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ಮತ್ತು ಸಹಕಾರ ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ತಲಾ 10 ಸಾವಿರ ರೂ ದಂಡ ವಿಧಿಸಿದೆ.
ಜನವರಿ 1 ರಂದು ಶಿಮೂಲ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸೊರಬದ ಶ್ರೀಪಾದ ರಾವ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಶಿಮೂಲ್ ನಲ್ಲಿ ಬಿಜೆಪಿ 3 , ಕಾಂಗ್ರೆಸ್ 9 ,ಜೆಡಿಎಸ್ 1 ನಿರ್ದೇಶಕರು ಇದ್ದಾರೆ. ಇದರಲ್ಲಿ ಕಳೆದ ಡಿಸಂಬರ್ನಲ್ಲಿ ಶಿಕಾರಿಪುರ ತಾಲೂಕು ಹೀರೆಬಂಬೂರು ಗ್ರಾಮದ ಶಿವಶಂಕರ, ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಂಚಗಾರನಹಳ್ಳಿಯ ಟಿ.ಬಸಪ್ಪ ಹಾಗೂ ಹೊಸನಗರ ತಾಲೂಕಿನ ಕಾರ್ಗಡಿ ವಿದ್ಯಾಧರ್ ರವರಿಗೆ ಸಹಕಾರ ಇಲಾಖೆ 29(c) ರಂತೆ ನೋಟಿಸ್ ನೀಡಿ, ಚುನಾವಣೆಗೆ ಅನರ್ಹರನ್ನಾಗಿಸಲಾಗಿತ್ತು. ಇವರು ಹೈಕೋರ್ಟ್ಗೆ ಹೋಗಿ ನೀಡಲಾದ ನೋಟಿಸ್ಗೆ ತಡೆಯಾಜ್ಞೆ ತಂದಿದ್ದರು. ಕಳೆದ ಮೂರು ತಿಂಗಳ ಸತತ ಕೋರ್ಟ್ ಹೋರಾಟದ ಫಲವಾಗಿ ಶಿವಶಂಕರ್ ಪರ ನ್ಯಾಯಾಲಯ ತೀರ್ಪು ನೀಡಿದೆ.
ಇದನ್ನೂ ಓದಿ: ಪಿಎಸ್ಐ ಮರುಪರೀಕ್ಷೆ ಸೂಕ್ತ: ಮಾಜಿ ಸಚಿವ ಎಂಬಿಪಿ
ಶಿವಶಂಕರಪ್ಪ ಹಾಗೂ ಬಸಪ್ಪನವರ ವಿರುದ್ಧ ಸಹಕಾರ ಬ್ಯಾಂಕ್ಗಳಲ್ಲಿ ಬಾಂಡ್ ರೂಪದಲ್ಲಿ ಇಡಬೇಕಾದ ನಿಯಮವನ್ನು ಉಲ್ಲಂಘಿಸಿದ ಆರೋಪ ಹೊರಿಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ, ಮತದಾನದಲ್ಲಿ ಭಾಗವಹಿಸದಂತೆಯೇ ತಡೆಯಲಾಗಿತ್ತು. ಶಿವಶಂಕರ್ ಕಳೆದ ಬಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು. ಇದೆಲ್ಲದರ ನಡುವೆ ಈಗ ಶಿವಶಂಕರ್ ಕೋರ್ಟ್ನಲ್ಲಿ ಗೆದ್ದು ಬಂದಿದ್ದಾರೆ.