ಶಿವಮೊಗ್ಗ: ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದ ಮೇಲೆ ಅರಣ್ಯ ಇಲಾಖೆಯ ಸಂಚಾರಿ ದಳ ದಾಳಿ ನಡೆಸಿತ್ತು. ಶಿವಮೊಗ್ಗ ಹಾಗೂ ಬೆಂಗಳೂರು ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು.
ಶಿವಮೊಗ್ಗ ಹೊರವಲಯದಲ್ಲಿ ಇರುವ ಪಶು ವೈದ್ಯಕೀಯ ಮಹಾವಿದ್ಯಾಲಯದ ಮೇಲೆ ದಾಳಿ ನಡೆಸಿದ್ದ ಅರಣ್ಯ ಅಧಿಕಾರಿಗಳು ನಿನ್ನೆ ಬೆಳಗ್ಗೆಯಿಂದಲೇ ಪರಿಶೀಲನೆ ಕೈಗೊಂಡಿದ್ದರು.
ಓದಿ: 3,574.67 ಕೋಟಿ ರೂ. ಪೂರಕ ಅಂದಾಜಿನ ಎರಡನೇ ಕಂತಿಗೆ ವಿಧಾನಸಭೆ ಅಂಗೀಕಾರ
ಪಶು ವೈದ್ಯಕೀಯ ಕಾಲೇಜಿನ ಲ್ಯಾಬ್ನಲ್ಲಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಶೆಡ್ಯೂಲ್ 1 ಕ್ಕೆ ಸೇರಿದ ಪ್ರಾಣಿಗಳ ಅಂಗಾಂಗಗಳನ್ನು ಇಟ್ಟುಕೊಂಡಿದ್ದಾರೆ ಎಂಬ ಆರೋಪದ ಮೇಲೆ ದಾಳಿ ನಡೆಸಲಾಗಿದೆ. ಶೆಡ್ಯೂಲ್ಡ್ 1ನ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ಕಾಡು ಕೋಣ ಹೀಗೆ ಇಂತಹ ಪ್ರಾಣಿಗಳ ಅಂಗಾಂಗಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆ ಇಟ್ಟು ಕೊಳ್ಳಲಾಗಿದೆ ಅರಣ್ಯ ಇಲಾಖೆ ಮಾಹಿತಿ ದೊರೆತ್ತಿತ್ತು. ಹೀಗಾಗಿ ಎಸಿಎಫ್ ವಿರೇಶ್ ಗೌಡ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ಕೈಗೊಳ್ಳಲಾಗಿತ್ತು.
ಶಿವಮೊಗ್ಗ ಜಿಲ್ಲೆ ಸೇರಿದಂತೆ ಇತರೆ ಕಡೆ ಶೆಡ್ಯೂಲ್ಡ್ 1 ರ ಪ್ರಾಣಿಗಳು ಮೃತ ಪಟ್ಟಾಗ ಪ್ರಾಣಿಗಳ ಮರಣೋತ್ತರ ಪರೀಕ್ಷೆಗೆ ಕಲಿಕಾ ವಿದ್ಯಾರ್ಥಿಗಳು ಹೋದಾಗ ಅಲ್ಲಿಂದ ಅಂಗಾಂಗಗಳನ್ನು ತಂದಿದ್ದಾರೆ ಎನ್ನಲಾಗುತ್ತಿದೆ. ಹೀಗೆ ತರುವಾಗ ಕಾನೂನು ಪ್ರಕಾರ ತರಬೇಕು ಎನ್ನುವುದು ಅರಣ್ಯ ಇಲಾಖೆಯ ವಾದವಾಗಿದೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಹೋಗಿದ್ದು, ಮುಂದಿನ ದಿನಗಳಲ್ಲಿ ಈ ದಾಳಿಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲಿದೆ.