ಶಿವಮೊಗ್ಗ: ಸಚಿವ ಜೆ.ಸಿ.ಮಾಧುಸ್ವಾಮಿಯವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಿ ಜಿಲ್ಲಾ ಹಾಲುಮತ ಮಹಾಸಭಾ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹಾಲುಮತ ಮಹಾಸಭಾದ ಸದಸ್ಯರು, ತುಮಕೂರಿನ ಹುಳಿಯಾರ್ನಲ್ಲಿ ಕನಕದಾಸರ ಸರ್ಕಲ್ ಬಗ್ಗೆ ಗೊಂದಲ ಮೂಡಿದ ವೇಳೆ ನಡೆದ ಶಾಂತಿ ಸಭೆಯಲ್ಲಿ ಮಾಧುಸ್ವಾಮಿಯವರು ಶ್ರೀ ಈಶ್ವರಾನಂದಪುರಿ ಸ್ವಾಮೀಜಿಯವರಿಗೆ ಅಗೌರವ ತೋರಿ ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.
ಸಿಎಂ ಯಡಿಯೂರಪ್ಪನವರು ಹಾಲುಮತ ಸಮಾಜದ ಕ್ಷಮೆ ಕೇಳಿದ್ರೂ ಸಹ ಸಚಿವ ಮಾಧುಸ್ವಾಮಿಯವರು ಕ್ಷಮೆ ಕೇಳಲು ನಿರಾಕರಣೆ ಮಾಡುತ್ತಿರುವುದು ಖಂಡನೀಯವಾಗಿದೆ ಎಂದರು. ಸ್ವಾಮಿಜೀಗಳಲ್ಲಿ ಕ್ಷಮೆ ಕೇಳದೇ, ತಾನು ಒಂದು ಸಮಾಜದ ನಾಯಕ. ನನಗೆ ಬೇರೆ ಸಮಾಜದ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳುವ ಮೂಲಕ ಸಂವಿಧಾನ ವಿರೋಧಿಯಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.