ಶಿವಮೊಗ್ಗ : ಬೈಕ್ ಚಾಲನೆ ವೇಳೆ ಹೆಲ್ಮೆಟ್ ಕಡ್ಡಾಯವಾಗಿ ಬಳಸುವಂತೆ ಮನವಿ ಮಾಡುತ್ತಿರುವ ಸಾಗರ ನಗರ ಪೊಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಮಹಾಬಲೇಶ್ವರ ನಾಯ್ಕ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕೆಲ ದಿನದ ಹಿಂದೆ ಬೈಕ್ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟಿದ್ದನು. ಈ ವೇಳೆ ಯುವಕನ ಶವವನ್ನು ಶವಾಗಾರದಿಂದ ಒಯ್ಯಲು ಬಂದಿದ್ದ ಯುವಕರ ಬಳಿ ಸರ್ಕಲ್ ಇನ್ಸ್ಪೆಕ್ಟರ್ ಹೆಲ್ಮೆಟ್ ಬಳಸುವಂತೆ ಮನವಿ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೆಲ್ಮೆಟ್ ಬಳಸಿ, ಡಿಎಲ್, ಆರ್ಸಿ ಬುಕ್ ಸೇರಿದಂತೆ ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಹೆಲ್ಮೆಟ್ ಬಳಸಿದಲ್ಲಿ ಅಪಘಾತ ಸಂಭವಿಸಿದರೂ ಮೃತಪಡುವ ಸಾಧ್ಯತೆ ಕಮ್ಮಿ ಇರುತ್ತದೆ. ವಾಹನಗಳ ದಾಖಲೆಗಳು ಸರಿ ಇಲ್ಲದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಆತನ ಕುಟುಂಬ ಬೀದಿಗೆ ಬರುವ ಸಾಧ್ಯತೆಯೇ ಹೆಚ್ಚಿರುತ್ತದೆ. ನೀವು ಕೇವಲ ನಿಮ್ಮ ಬಗ್ಗೆ ಮಾತ್ರ ಯೋಚನೆ ಮಾಡಬೇಡಿ. ನಿಮ್ಮ ಕುಟುಂಬದ ಬಗ್ಗೆಯೂ ಯೋಚನೆ ಮಾಡಿ ಎಂದು ಯುವಕರಿಗೆ ಕಿವಿಮಾತು ಹೇಳಿದ್ದಾರೆ.
ಭಾರತೀಯ ಸೇನೆಯಲ್ಲಿ 18 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತಿ ಬಳಿಕ ಸಬ್ ಇನ್ಸ್ಪೆಕ್ಟರ್ ಆಗಿ ಕಳೆದ ಕೆಲ ವರ್ಷದ ಹಿಂದೆ ಸರ್ಕಲ್ ಇನ್ಸ್ ಪೆಕ್ಟರ್ ಆಗಿರುವ ಮಹಾಬಲೇಶ್ವರ ನಾಯ್ಕ, ಈ ಹಿಂದಿನಿಂದಲೂ ವಾಹನ ಚಾಲನೆ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇದೀಗ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು ಸರ್ಕಲ್ ಇನ್ಸ್ ಪೆಕ್ಟರ್ ಅವರ ಸಾಮಾಜಿಕ ಕಳಕಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ನೋಡಿದ ಯುವಕರು ಹೆಲ್ಮೆಟ್ ಖರೀದಿಸುವ ಜೊತೆಗೆ ತಮ್ಮ ವಾಹನದ ದಾಖಲೆಗಳನ್ನೂ ಸರಿ ಮಾಡಿಸಿಕೊಂಡು ಇನ್ಸ್ ಪೆಕ್ಟರ್ ಗೆ ಕರೆ ಮಾಡಿ ತಿಳಿಸುತ್ತಿದ್ದಾರೆ. ತಮ್ಮ ಮಾತುಗಳಿಂದ ಜನ ಪ್ರೇರಣೆಗೊಂಡಿರುವುದಕ್ಕೆ ಸರ್ಕಲ್ ಇನ್ಸ್ ಪೆಕ್ಟರ್ ಸಹ ಖುಷಿಯಾಗಿದ್ದಾರೆ.