ಶಿವಮೊಗ್ಗ: ಕಳೆದ ದಿನಗಳ ಹಿಂದಷ್ಟೇ ಸಂಗಮೇಶ್ವರ ಮಾಡಿಸಿದ್ದ ಕಬ್ಬಡಿ ಗಲಾಟೆ ಅವರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ವಿಧಾನ ಪರಿಷತ್ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.
ಭದ್ರಾವತಿ ಹಾಗೂ ತೀರ್ಥಹಳ್ಳಿ ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿಗೆ ಮುಖಭಂಗ ಆದ ಹಿನ್ನೆಲೆ ಈ ಬಗ್ಗೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕಬ್ಬಡಿ ಗಲಾಟೆ ಮಾಡಿಸಿದ್ದ ಭದ್ರಾವತಿ ಶಾಸಕ ಸಂಗಮೇಶ್ವರ ಅವರಿಗೆ ಈ ಚುನಾವಣೆ ಅನುಕೂಲವಾಗಿದೆ. ಸಂಗಮೇಶ್ವರ ಅವರ ಬಗ್ಗೆ ಅಲ್ಪಸಂಖ್ಯಾತ ಸಮುದಾಯದವರಿಗೆ ಒಂದು ಅನುಮಾನ ಇತ್ತು, ಎಲ್ಲಿ ಬಿಜೆಪಿ ಸೇರಿ ಬಿಡುತ್ತಾರೆ ಎಂದು. ನಾವು ಯಾವಾಗ ಕಬ್ಬಡಿ ಗಲಾಟೆಯಲ್ಲಿ ಕಾನೂನು ಕ್ರಮ ಕೈಗೊಂಡೆವೊ ಆವಾಗ ನಾನು ಬಿಜೆಪಿ ಸೇರಲ್ಲಾ ಕಾಂಗ್ರೆಸ್ನಲ್ಲೆ ಇರ್ತೇನೆ ಎಂದಿದ್ದು ಸಹ ಕಾಂಗ್ರೆಸ್ಗೆ ವರದಾನವಾಗಿದೆ ಎಂದರು.
ಭದ್ರಾವತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಬಿಜೆಪಿಗೆ ಶಕ್ತಿ ಕಡಿಮೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಶಕ್ತಿಯನ್ನು ವೃದ್ಧಿಸುವ ಕೆಲಸ ಮಾಡಿದ್ದೆವು. ಹಾಗಾಗಿ ಕಳೆದ ಬಾರಿ ಎರಡು ಸ್ಥಾನ ಇದಿದ್ದು ಈಗ ನಾಲ್ಕು ಆಗಿದೆ. ಹಾಗೆಯೇ ನಾಲ್ಕೈದು ಜನ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಭದ್ರಾವತಿಯ ಫಲಿತಾಂಶ ನಮಗೇನು ಆಶ್ಚರ್ಯ ತರಿಸಿಲ್ಲ.ಪ್ರಯತ್ನ ಮಾಡಿದ್ದೆವು. ಫಲ ಸಿಕ್ಕಿಲ್ಲ ಎಂಬ ಸಣ್ಣ ನೋವು ಇದೆ ಅಷ್ಟೇ ಎಂದರು.