ರಾಮನಗರ: ಠಾಣೆಯಲ್ಲೇ ವಿಷ ಕುಡಿದು ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದಿದ್ದು, ಪೊಲೀಸರ ಕಿರುಕುಳದಿಂದ ಹೀಗೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಶಶಿಕುಮಾರ್ (26) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಎನ್ನಲಾಗಿದೆ. ಗಂಡ-ಹೆಂಡತಿ ನಡುವಿನ ಕಲಹ ವಿಚಾರವಾಗಿ ಶಶಿಕುಮಾರ್ನನ್ನು ಠಾಣೆಗೆ ಕರಿಸಿದ್ದ ಪೊಲೀಸರು ವಿನಾ ಕಾರಣ ಆತನಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಪದೇ ಪದೇ ಠಾಣೆಗೆ ಕರಿಸಿದ್ದ ಪೊಲೀಸರ ವಿರುದ್ಧ ಅಸಮಾಧಾನಗೊಂಡಿದ್ದ ಶಶಿಕುಮಾರ್ ಇದೆಲ್ಲದರಿಂದ ಬೇಸತ್ತು ಠಾಣೆಯಲ್ಲೇ ವಿಷ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಘಟನೆ ವಿವರ:
ಶಶಿಕುಮಾರ್ ಮೂರು ವರ್ಷಗಳ ಹಿಂದೆ ಶೃತಿ ಎಂಬುವರನ್ನ ವಿವಾಹವಾಗಿದ್ದ. ಹಣಕಾಸಿನ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಆಗಾಗ ಜಗಳವಾಗುತ್ತಿತ್ತು. ನಂತರ ಜಗಳ ತಾರಕಕ್ಕೇರಿದ್ದರಿಂದ ಇಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆದರೆ ಶಶಿಕುಮಾರ್ನನ್ನ ಪದೇ ಪದೇ ಠಾಣೆಗೆ ಕರೆಸಿ ಪೊಲೀಸರು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಠಾಣೆಯಲ್ಲಿಯೇ ವಿಷ ಕುಡಿದಿದ್ದಾನೆ ಎನ್ನಲಾಗಿದೆ.
ವಿಷ ಕುಡಿದ ವ್ಯಕ್ತಿಯನ್ನ ಮಹಿಳಾ ಠಾಣೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗೆಂದು ಮಂಡ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.