ರಾಮನಗರ : ಚನ್ನಪಟ್ಟಣ ತಾಲೂಕಿನಲ್ಲಿ ಇಲ್ಲಿನ ಬಿಜೆಪಿ ಶಾಸಕರು ಸಬ್ ಇನ್ಸ್ಪೆಕ್ಟರ್ ವರ್ಗಾವಣೆಗೆ 30 ಲಕ್ಷ ರೂಪಾಯಿ ಬೇಡಿಕೆ ಇಡುತ್ತಿದ್ದಾರೆ. ಈ ರೀತಿ ಹಣ ಲೂಟಿ ಮಾಡುವ ಬದಲು ಮನೆಯಲ್ಲಿ ಇದ್ದು ಗೌರವಯುತ ಜೀವನ ನಡೆಸುವುದು ಒಳ್ಳೆಯದು ಎಂದು ಎಂಎಲ್ಸಿ ಸಿ.ಪಿ. ಯೋಗೇಶ್ವರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದರು.
ಚನ್ನಪಟ್ಟಣ ನಗರದಲ್ಲಿ ಮಾತನಾಡಿದ ಅವರು, ತಾಲೂಕಿನ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸುವುದಕ್ಕೆ ಲೆಟರ್ ಹೆಡ್ ಆಕ್ಷನ್ಗೆ ಹಾಕಿಕೊಂಡು ಕೂತಿದ್ದಾರೆ. ಈ ರೀತಿ ಹಣ ಸಂಪಾದನೆ ಮಾಡುವ ಅವಶ್ಯಕತೆ ಇದೆಯಾ ಎಂದು ಪ್ರಶ್ನೆ ಮಾಡಿದರು. ಅಧಿಕಾರಿಗಳ ವರ್ಗಾವಣೆಗೆ ದುಡ್ಡು ಕೇಳಿದರೆ, ಕಡೆಗೆ ಅಧಿಕಾರಿಗಳು ಜನರಿಂದಲೇ ಸುಲಿಗೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ರೀತಿ ಹಗಲು ದರೋಡೆ ಮಾಡುವ ಅವಶ್ಯಕತೆ ಇದೆಯಾ... ಇಂತಹ ಜೀವನ ಮಾಡುವ ಬದಲು ರಾಜಕೀಯ ಬಿಟ್ಟು ಮನೆಯಲ್ಲಿಯೇ ನೆಮ್ಮದಿ ಜೀವನ ನಡೆಸುವಂತೆ ಸಲಹೆ ನೀಡಿದರು.
ಓದಿ-ಕಾಂಗ್ರೆಸ್ನಲ್ಲೂ ಸಿಎಂ ಸ್ಥಾನಕ್ಕೆ ಸಾಕಷ್ಟು ಜನ ಕ್ಯೂನಲ್ಲಿದ್ದಾರೆ: ಸತೀಶ್ ಜಾರಕಿಹೊಳಿ
ಪಂಚಾಯಿತಿ ಚುನಾವಣೆಯಲ್ಲಿ ಏನೋ ಮಾಡುತ್ತೇನೆ ಎಂದು ನನ್ನ ವಿರುದ್ಧ ಸವಾಲ್ ಹಾಕಿದರು. ಆದರೆ, ಏನೂ ಮಾಡಲಿಕ್ಕೆ ಆಗಲಿಲ್ಲ. ನಾನು ಇಂದಲ್ಲ ನಾಳೆ ಮಂತ್ರಿಯಾಗುತ್ತೇನೆ ಎಂದು ಹೇಳುತ್ತಲೇ ಇದ್ದಾರೆ. ಇದೇ ರೀತಿ ಎಷ್ಟು ದಿನ ಹೇಳಿ ಜನರನ್ನು ಸೆಳೆಯಲು ಸಾಧ್ಯ ಎಂದು ಪರೋಕ್ಷವಾಗಿ ಕುಟುಕಿದರು.
ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರು ಕೂಡ ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ಈ ಚುನಾವಣಾ ಫಲಿತಾಂಶಕ್ಕೂ, ವಿಧಾನಸಭಾ ಚುನಾವಣಾ ಫಲಿತಾಂಶಕ್ಕೂ ವ್ಯತ್ಯಾಸವಿದೆ. ಇದರಲ್ಲಿ ನಾವು ಗೆದ್ದೆವು ಎಂದು ಬೀಗಲು ಸಾಧ್ಯವಿಲ್ಲ. ಕೆಲವೆಡೆ ಕಾಂಗ್ರೆಸ್ ಹಣಬಲದಿಂದ ಗೆದ್ದಿದೆ. ಆದರೆ, ಜಿಲ್ಲೆಯ ಜನ ಹಣ ಬಲಕ್ಕಿಂತ ವ್ಯಕ್ತಿಗೆ ಬೆಂಬಲ ನೀಡುವವರು. ಈ ಬಾರಿಯ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ 25 ಕ್ಕೂ ಹೆಚ್ಚು ಕಡೆಗಳಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎಂದರು.