ರಾಮನಗರ: ನಾನು ಕಷ್ಟದಲ್ಲಿದ್ದಾಗ ನನ್ನ ಒಕ್ಕಲಿಗ ಸಮಾಜ ಬೆನ್ನಿಗೆ ನಿಂತಿತ್ತು. ನನ್ನ ಮತ್ತು ಕುಟುಂಬದ ವಿರುದ್ಧ ಸಾಕಷ್ಟು ಷಡ್ಯಂತ್ರ ನಡೆದಿತ್ತು. ಕಾನೂನನ್ನ ನನ್ನ ವಿರುದ್ಧ ದುರುಪಯೋಗ ಮಾಡಲಾಗಿತ್ತು. ಆ ವಿಚಾರವಾಗಿ ಸಾಕಷ್ಟು ತೊಂದರೆ ಅನುಭವಸಿದ್ದೇನೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ರಾಮನಗರದ ದ್ಯಾವರಸೇಗೌಡನ ದೊಡ್ಡಿ ರಸ್ತೆಯ ಒಕ್ಕಲಿಗ ಭವನದ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಷಡ್ಯಂತ್ರಕ್ಕೊಳಗಾದಾಗ ಅನಿತಾ ಕುಮಾರಸ್ವಾಮಿ ನನ್ನ ಪತ್ನಿಗೆ ಧೈರ್ಯ ಹೇಳಿದ್ದರು. ಕುಮಾರಸ್ವಾಮಿಯವರು ನನ್ನ ತಾಯಿಗೆ ಧೈರ್ಯ ಹೇಳಿದ್ದರು. ನನ್ನ ಪರವಾಗಿ ಸ್ವಾಮೀಜಿಗಳು ರಸ್ತೆಗಳಿದು ಹೋರಾಟ ಮಾಡಿದ್ದರು. ಅದನ್ನೆಲ್ಲ ನಾನು ಮರೆಯಲು ಸಾಧ್ಯವಿಲ್ಲ ಎಂದರು.
ಸಮಾರಂಭದಲ್ಲಿ ಡಿಕೆಶಿ, ಎಸ್.ಎಂ.ಕೃಷ್ಣ, ಕುಮಾರಸ್ವಾಮಿ, ದೇವೇಗೌಡರು, ಪುಟ್ಟಪರ್ತಿ ಸಾಯಿಬಾಬಾರನ್ನು ನೆನೆದು ಭಾವುಕರಾದರು. ನಾನು ಏನೇ ಮಾಡಿದ್ರು ಒಕ್ಕಲಿಗ ಅಂತಾರೆ. ಒಕ್ಕಲಿಗ ಅಂತಾನೇ ಮಂತ್ರಿ ಮತ್ತೊಂದು ಅಧಿಕಾರ ನೀಡುತ್ತಾರೆ. ಒಕ್ಕಲಿಗ ಎಂದು ಅನ್ನಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ. ಒಕ್ಕಲಿಗ ಅಂತಾ ಅನ್ನಿಸಿಕೊಳ್ಳುವುದೇ ಭಾಗ್ಯ. ಕೆಂಗಲ್ ಹನುಮಂತಯ್ಯನವರು ಬೆಂಗಳೂರನ್ನ ರಾಜಧಾನಿ ಮಾಡದಿದ್ದರೆ ಒಕ್ಕಲಿಗರ ಪರಿಸ್ಥಿತಿ ಏನಾಗುತ್ತಿತ್ತು? ದಾವಣಗೆರೆ, ಹುಬ್ಬಳ್ಳಿ ರಾಜಧಾನಿ ಆಗಿದ್ದರೆ ಏನು ಮಾಡಲಾಗುತ್ತಿರಲಿಲ್ಲ. ಒಕ್ಕಲಿಗರು ಬೇರೆಯವರನ್ನ ತುಳಿಯುವುದಿಲ್ಲ. ನಮ್ಮನ್ನು ನಾವೇ ತುಳಿದುಕೊಂಡಿದ್ದೇವೆ ಎಂದರು.
ರಾಜಕೀಯ ಮಾಡುವವರು ಸಹ ಸಾಕಷ್ಟು ತಪ್ಪುಗಳನ್ನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುವುದಾಗಿ ಹೇಳಿದರು. ಇದೇ ವೇಳೆ ಒಕ್ಕಲಿಗರ ಭವನ ಅಷ್ಟೇ ಅಲ್ಲ ಇಲ್ಲಿ ಸಮುದಾಯ ಭವನ ನಿರ್ಮಿಸುವ ಮೂಲಕ ಇತಿಹಾಸ ನಿರ್ಮಿಸೋಣ. ಇದಕ್ಕೆ ಸ್ವಾಮೀಜಿಗಳು ಕೂಡ ಸಾಥ್ ನೀಡುತ್ತಾರೆ. ನೀವೂ ನೀಡಬೇಕೆಂದು ಎಲ್ಲರಲ್ಲಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು .