ರಾಮನಗರ: ಚನ್ನಪಟ್ಟಣ ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಒಂದೇ ತಿಂಗಳಲ್ಲಿ ಮೂರು ಬಾರಿ ವರ್ಗಾವಣೆ ಆದೇಶ ಹೊರಬಿದ್ದಿರುವುದು ತಾಲೂಕಿನ ಇತಿಹಾಸದಲ್ಲೇ ಇದೇ ಮೊದಲಾಗಿದೆ. ನಾನಾ, ನೀನಾ ಎನ್ನುವಂತೆ ಪೈಪೋಟಿಗೆ ಇಳಿದಿರುವ ಈ ಜನಪ್ರತಿನಿಧಿಗಳ ಪರಸ್ಪರ ಕಾದಾಟಕ್ಕೆ ತಾಲೂಕು ದಂಡಾಧಿಕಾರಿ ಹುದ್ದೆ ಅಕ್ಷರಶಃ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಸಿಪಿವೈ ಹಾಗೂ ಹೆಚ್ಡಿಕೆ ಜಟಾಪಟಿ - ಯೋಗೇಶ್ವರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ತಹಶೀಲ್ದಾರ್ ಬಿ. ಕೆ. ಸುದರ್ಶನ್ ಅವರಿಗೆ ವರ್ಗಾವಣೆ ಆದೇಶ ಹೊರಬಿದ್ದ 24 ಗಂಟೆಯೊಳಗೆ ಅವರನ್ನು ಬಂದಷ್ಟೇ ವೇಗದಲ್ಲಿ ಎತ್ತಂಗಡಿ ಮಾಡಿಸಲಾಗಿದೆ. ಅವರ ಜಾಗಕ್ಕೆ ಜಿ. ಪಿ ಹರ್ಷವರ್ಧನ್ ಅವರನ್ನು ತಂದು ನಿಯೋಜನೆ ಮಾಡಲಾಗಿದೆ. ಬಿಜೆಪಿ ಸರ್ಕಾರದಲ್ಲೂ ಮೇಲುಗೈ ಸಾಧಿಸುತ್ತೇನೆ ಎನ್ನುವುದನ್ನು ಸಾಬೀತುಪಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿರುವುದು ಯೋಗೇಶ್ವರ್ ಅವರ ಗೇಮ್ ಪ್ಲಾನ್ ಉಲ್ಟಾ ಹೊಡೆದಿದೆ.
ಕಳೆದ ಕೆಲ ದಿನಗಳಿಂದ ತಾಲೂಕಿನಲ್ಲಿ ತಹಶೀಲ್ದಾರ್ ವರ್ಗಾವಣೆ ವಿಚಾರದಲ್ಲಿ ತೀವ್ರ ಹಗ್ಗಜಗ್ಗಾಟದಲ್ಲಿ ನೂತನ ತಹಶೀಲ್ದಾರ್ ಆಗಿ ಜಿ. ಪಿ ಹರ್ಷವರ್ಧನ್ ಅವರನ್ನು ವರ್ಗಾವಣೆಗೊಳಿಸಿ ಏ. 30ರಂದು ಕಂದಾಯ ಸಚಿವಾಲಯ ಆದೇಶ ಹೊರಡಿಸಿದೆ. ತಾಲೂಕು ದಂಡಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಚಿವಾಲಯ ಅಧೀನ ಕಾರ್ಯದರ್ಶಿ ಎಲ್. ನಾಗೇಶ್ ಅವರನ್ನು ಏ. 29 ರಂದು ವರ್ಗಾವಣೆಗೊಳಿಸಿ, ಆ ಜಾಗಕ್ಕೆ ಸುದರ್ಶನ್ ಅವರನ್ನು ತಂದು ಪ್ರತಿಷ್ಠಾಪಿಸಿದರಲ್ಲದೇ ಅಧಿಕಾರ ವಹಿಸಿಕೊಳ್ಳುವಲ್ಲಿ ಯಶಸ್ವಿಯಾಗಿ ಸಂಭ್ರಮದ ವಾತಾವರಣಕ್ಕೆ ಮತ್ತೊಂದು ವರ್ಗಾವಣೆ ಆದೇಶ ಒಂದೇ ದಿನದಲ್ಲಿ ತಣ್ಣೀರೆರಚಿದೆ.
ಬಂದು ಅಧಿಕಾರ ಸ್ವೀಕರಿಸಿದ ವೇಗದಲ್ಲಿಯೇ ಸುದರ್ಶನ್ ಅವರನ್ನು ಕುಟುಂಬ ಇ-ಆಡಳಿತ ಕೇಂದ್ರಕ್ಕೆ ಯೋಜನಾ ವ್ಯವಸ್ಥಾಪಕರನ್ನಾಗಿ ವರ್ಗಾಯಿಸಿರುವುದು ತಹಶೀಲ್ದಾರ್ ವರ್ಗಾವಣೆಯ ಹಾವು-ಏಣಿ ಆಟಕ್ಕೆ ಬ್ರೇಕ್ ಬಿದ್ದಂತಾಗಿದೆ.
ಓದಿ: ಆ್ಯಸಿಡ್ ದಾಳಿಗೆ ತುತ್ತಾದ ಯುವತಿಯ ಚಿಕಿತ್ಸೆಗೆ 1 ಲಕ್ಷ ರೂ. ಘೋಷಿಸಿದ ಸಚಿವ ಮುರುಗೇಶ್ ನಿರಾಣಿ