ರಾಮನಗರ: ಬೆಳ್ಳಂಬೆಳಗ್ಗೆ ಬಮೂಲ್ನ ಶಿಬಿರ ವ್ಯವಸ್ಥಾಪಕನ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಮನಗರದ ಅರ್ಕಾವತಿ ಬಡಾವಣೆಯಲ್ಲಿರುವ ಬಮೂಲ್(ಬೆಂಗಳೂರು ಸಹಕಾರಿ ಹಾಲು ಒಕ್ಕೂಟ) ಶಿಬಿರ ವ್ಯವಸ್ಥಾಪಕ ಶಿವಶಂಕರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ವ್ಯವಸ್ಥಾಪಕ ಶಿವಶಂಕರ್, ಬಮೂಲ್ನಲ್ಲಿ ಅಕ್ರಮ ಸಂಪಾದನೆ ನಡೆಸುತ್ತಿದ್ದಾನೆ ಎಂದು ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
ದೂರಿನಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ಮಹತ್ವದ ದಾಖಲೆ ಪತ್ರಗಳು ಹಾಗೂ ಚಿನ್ನಾಭರಣ ದೊರೆತಿವೆ ಎನ್ನಲಾಗಿದೆ.
ರಾಮನಗರ ಎಸಿಬಿ ಎಸ್ಪಿ ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು, ಏಕಕಾಲದಲ್ಲಿ ಶಿವಶಂಕರ್ ಅವರ ಕೋಲಾರದ ಮನೆ ಮೇಲೂ ದಾಳಿ ನಡೆಸಿದ್ದಾರೆ. ಮನೆಯಲ್ಲಿರುವ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.