ರಾಯಚೂರು : ಕಳೆದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಅತೃಪ್ತ ಶಾಸಕರು ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿದರು. ಇದರ ಫಲವಾಗಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಅಂದು ರಾಜೀನಾಮೆ ನೀಡಿದ ಶಾಸಕರಲ್ಲಿ ಮಸ್ಕಿಯ ಪ್ರತಾಪಗೌಡ ಪಾಟೀಲ್ ಕೂಡ ಒಬ್ಬರು.
ರಾಜೀನಾಮೆ ನೀಡಿ ಬಿಜೆಪಿ ಸೇರಿದ ಬಳಿಕ ಸೂಕ್ತಸ್ಥಾನ ಮಾನದ ಭರವಸೆ ನೀಡಲಾಗಿತ್ತು. ಆದರೆ, ಇದೀಗ ಮಸ್ಕಿ ಉಪಚುನಾವಣೆಗೆ ಕಾನೂನಾತ್ಮಕವಾಗಿ ಸಮಸ್ಯೆ ತಲೆದೂರಿ ಉಪ ಚುನಾವಣೆ ನಡೆಯುತ್ತಿಲ್ಲ. ಪರಿಷತ್ ಚುನಾವಣೆ ಟಿಕೇಟ್ ಆದ್ರೂ ಸಿಗುತ್ತೆ ಅನ್ನೋ ನಿರೀಕ್ಷೆ ಹುಸಿಯಾಗಿ ಅತಂತ್ರರಾಗಿದ್ದಾರೆ ಪ್ರತಾಪಗೌಡ ಪಾಟೀಲ್.
ಮೈತ್ರಿ ಸರ್ಕಾರದ ವೇಳೆ ಕಾಂಗ್ರೆಸ್ ಅತೃಪ್ತ ಶಾಸಕರ ತಂಡದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡು ಪ್ರತಾಪಗೌಡ ಪಾಟೀಲ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಆ ವೇಳೆ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ರು. ಇದನ್ನ ಪ್ರಶ್ನಿಸಿ ನ್ಯಾಯಾಲಯದ ಮೇಟ್ಟಿಲು ಏರಿ, ನ್ಯಾಯಲಯದಲ್ಲಿ ತೀರ್ಪು ತಮ್ಮ ಪರವಾಗಿ ಬಂತು. ಆಗ ಖಾಲಿಯಿರುವ ಮಸ್ಕಿ ಕ್ಷೇತ್ರದ ಉಪಚುನಾವಣೆ ನಡೆಯುತ್ತದೆ ಅನ್ನೋ ಭರವಸೆಯನ್ನ ಇಟ್ಟುಕೊಂಡಿದ್ರು.
ಆದರೆ, ಸಾರ್ವಜನಿಕ ಚುನಾವಣೆಯಲ್ಲಿ ಅಕ್ರಮವಾಗಿ ಮತದಾನವಾಗಿದೆ ಎಂದು ಅಂದಿನ ಕಾಂಗ್ರೆಸ್ ಮುಖಂಡ, ಇಂದಿನ ಕಾಡಾ ಅಧ್ಯಕ್ಷ ಬಸವನಗೌಡ ತುರುವಿಹಾಳ ನ್ಯಾಯಾಲಯದಲ್ಲಿ ಧಾವೆ ಹಾಕಿದ್ರು. ನ್ಯಾಯಲಯದಲ್ಲಿ ಧಾವೆ ಇರುವ ಕಾರಣ ಬೈಎಲೆಕ್ಷನ್ಗೆ ಬ್ರೇಕ್ ಬಿದ್ದಿತ್ತು.
ಇದಾದ ಬಳಿಕ ಬಿಜೆಪಿ ವರಿಷ್ಠರು ಬಸವನಗೌಡ ತುರವಿಹಾಳ ಮನವೊಲಿಸಿ, ಧಾವೆಯನ್ನ ವಾಪಸ್ ತೆಗೆಸುವಲ್ಲಿ ಯಶ್ವಸಿಯಾಗಿದ್ರು. ಇದರಿಂದ ಪ್ರತಾಪಗೌಡ ಪಾಟೀಲ್ ನಿರಾಳವಾಗಿ, ಬೈ ಎಲೆಕ್ಷನ್ ಹಾದಿ ಸುಗಮವಾಯಿತು. ಆದರೆ, ಬಸವನಗೌಡ ತುರುವಿಹಾಳ ಬಳಿಕ ಇನ್ನೊಬ್ಬರು ನ್ಯಾಯಾಲಯದಲ್ಲಿ ಧಾವೆ ಹಾಕಿದ್ದರಿಂದ ಬೈ ಎಲೆಕ್ಷನ್ಗೆ ಬ್ರೇಕ್ ಬಿದ್ದಿದೆ. ಹೀಗಾಗಿ ಪರಿಷತ್ ಚುನಾವಣೆಗೆ ಟಿಕೇಟ್ ನೀಡುವಂತೆ ಪ್ರತಾಪಗೌಡ ಪಾಟೀಲ್ ಕೇಳಿದ್ರು. ಆದರೆ, ಅವರಿಗೆ ಟಿಕೇಟ್ ನೀಡಲಿಲ್ಲ.
ಕ್ಷೇತ್ರದ ಶಾಸಕರು ರಾಜೀನಾಮೆ ನೀಡಿದ ಬಳಿಕ ಕ್ಷೇತ್ರದ ಮರುಚುನಾವಣೆ ನಡೆಯಬೇಕು. ಆದರೆ, ಕಾನೂನಾತ್ಮಕ ಸಮಸ್ಯೆ ಎದುರಾಗಿ ಬೈ ಎಲೆಕ್ಷನ್ ನಡೆದಿಲ್ಲ. ಹೀಗಾಗಿ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಬಿಜೆಪಿ ವರಿಷ್ಠರಿಗೆ ಒತ್ತಾಯಿಸಿದ್ರು. ಆದರೆ, ವರಿಷ್ಠರು ಒತ್ತಡಕ್ಕೆ ಮಣೆ ಹಾಕದೇ ಇದ್ದುದರಿಂದ ಪರಿಷತ್ ಚುನಾವಣೆ ಸ್ಪರ್ಧೆ ಹುಸಿಯಾಗಿದೆ.
ಕಾಂಗ್ರೆಸ್ನಲ್ಲಿ ಹಿರಿತನ ಕಡೆಗಣಿಸಿ ಅನ್ಯರಿಗೆ ಸಚಿವ ಸ್ಥಾನವನ್ನ ನೀಡುವ ಮೂಲಕ ಹಿರಿಯ ಶಾಸಕರಿಗೆ ಅನ್ಯಾಯವಾಗಿದೆ ಎಂದು ಪಕ್ಷದಿಂದ ಹೊರಬಂದ್ರು. ಆದರೆ, ಬೈ ಎಲೆಕ್ಷನ್ಯಿಲ್ಲದೆ ಪರಿಷತ್ ಟಿಕೇಟ್ ನೀಡಬೇಕು ಅನ್ನೋ ಮಾತಿಗೂ ಬಿಜೆಪಿ ಹೈಕಮಾಂಡ್ ಮಣೆ ಹಾಕಿಲ್ಲ. ಇದರ ಪರಿಣಾಮ ಸದ್ಯ ಪ್ರತಾಪಗೌಡ ಪಾಟೀಲ್ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಮಸ್ಕಿ ಕ್ಷೇತ್ರವೂ ಶಾಸಕರಿಲ್ಲದೆ ಅನಾಥವಾಗಿದೆ.