ರಾಯಚೂರು: ನಗರದ ಮಡ್ಡಿಪೇಟೆ, ಹರಿಜನವಾಡ, ಗಂಗಾನಿವಾಸ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ರಸ್ತೆ ಮಧ್ಯೆ ವಿದ್ಯುತ್ ಕಂಬಗಳಿದ್ದು, ವಾಹನ ಸವಾರರು ಜೀವ ಭಯದಲ್ಲಿಯೇ ಸಂಚಾರ ಮಾಡುವಂತಾಗಿದೆ.
ಪ್ರಮುಖ ಬಡಾವಣೆಗಳಲ್ಲಿ ರಸ್ತೆಗಳ ಮಧ್ಯೆ ವಿದ್ಯುತ್ ಕಂಬಗಗಳಿದ್ದ ಕಾರಣ, ವಾಹನ ಸವಾರರರು ಜಾಗೃತರಾಗಿ ಸಂಚರಿಸಬೇಕಾಗಿದೆ. ಇಲ್ಲಿ ಸ್ವಲ್ಪ ಯಾಮಾರಿದರೂ ಸಿಮೆಂಟ್ ಕಂಬಕ್ಕೆ ವಾಹನಗಳು ಡಿಕ್ಕಿಯಾಗಿ ಅಪಾಯ ಸಂಭವಿಸೋದು ಗ್ಯಾರಂಟಿ. ಓಣಿಗಳಲ್ಲಿ ರಸ್ತೆ ಮಧ್ಯೆಯೇ ಕಂಬಗಳಿರುವ ಕಾರಣ, ಎದುರು ಬರುವ ವಾಹನಗಳು ಕೆಲವೊಮ್ಮೆ ಕಾಣದೇ ಅಪಘಾತವಾಗಿರುವ ಉದಾಹರಣೆಗಳಿವೆ.
ಕೊಳೆಗೇರಿ ಪ್ರದೇಶಗಳಲ್ಲಿ ಚಿಕ್ಕ ಗಾತ್ರದ ಫ್ಲಾಟ್ ಇರುವುದರಿಂದ ಹಲವೆಡೆ ಮನೆ ನಿರ್ಮಾಣದ ವೇಳೆ ಪಾದಚಾರಿಗಳು ಓಡಾಡುವ ಜಾಗವನ್ನೇ ಅತಿಕ್ರಮಿಸಿಕೊಳ್ಳುವುದರಿಂದ ಚಿಕ್ಕ ಚಿಕ್ಕ ಸಂಧಿಗಳ ಮಧ್ಯೆ ಸವಾರರು ಸಂಚರಿಸುವ ಅನಿವಾರ್ಯತೆ ಇದೆ.
ಈ ಬಗ್ಗೆ ಜೆಸ್ಕಾಂ ಇಲಾಖೆ ಸುರಕ್ಷತಾ ಕ್ರಮವನ್ನು ತೆಗೆದುಕೊಂಡಿಲ್ಲ. ಕನಿಷ್ಠ ಪಕ್ಷ ರಸ್ತೆಯ ಪಕ್ಕಕ್ಕೆ ಈ ಕಂಬಗಳನ್ನು ಸ್ಥಳಾಂತರ ಮಾಡುವ ಕಾರ್ಯವನ್ನೂ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ವಾಹನ ಸವಾರರು ಪ್ರಾಣಾಪಾಯ ಎದುರಿಸುತ್ತಿದ್ದಾರೆ.