ರಾಯಚೂರು: ಲಿಂಗಸುಗೂರಲ್ಲಿ ನಿನ್ನೆ ಸಿನಿಮೀಯ ಶೈಲಿಯಲ್ಲಿ ನಡೆದ ವ್ಯಕ್ತಿಯ ಅಪಹರಣ ಪ್ರಕರಣವನ್ನು ರಾಯಚೂರು ಪೊಲೀಸರು 24 ಗಂಟೆಯೊಳಗೆ ಭೇದಿಸಿ, ಐವರನ್ನು ಬಂಧಿಸಿದ್ದಾರೆ.
ಚಂದನಸಾಬ್, ರಮೇಶ್, ಸಂತೋಷ್, ಮಿರಾಜ್ ಮತ್ತು ಶಬ್ಬೀರ ಬಂಧಿತ ಆರೋಪಿಗಳು. ಇವರು ಸಿಂಧಗಿ ಮೂಲದವರಾಗಿದ್ದಾರೆ. (ಬೆಚ್ಚಿಬಿದ್ದ ಬಿಸಿಲೂರು: ಹಾಡಹಗಲೇ ಸಿನಿಮೀಯ ರೀತಿಯಲ್ಲಿ ವ್ಯಕ್ತಿ ಅಪಹರಣ -EXCLUSIVE)
ಪ್ರಕರಣ ಏನು?
ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡಾ ಮೂಲದ ಶರಣಪ್ಪ ಎಂಬ ವ್ಯಕ್ತಿಯನ್ನು ಈ ಆರೋಪಿಗಳು ಶನಿವಾರ ಲಿಂಗಸುಗೂರಲ್ಲಿ ಅಪಹರಣ ಮಾಡಿದ್ದರು. ಶರಣಪ್ಪನ ದೊಡ್ಡಪ್ಪನ ಮಗ ಕಬ್ಬಿನ ಕಟಾವಿಗೆ ಕಾರ್ಮಿಕರನ್ನು ಕರೆ ತರುವುದಾಗಿ ಸಿಂಧಗಿ ಮೂಲದ ನಾಲ್ವರಿಂದ ಹಣ ಪಡೆದಿದ್ದ. ಈತ ಕಾರ್ಮಿಕರನ್ನು ಕರೆದೊಯ್ಯದೆ ಹಣವನ್ನೂ ವಾಪಸ್ ನೀಡದೆ ತಲೆಮರೆಸಿಕೊಂಡಿದ್ದನು.
ಈ ಸಂಬಂಧ ಶರಣಪ್ಪನ್ನನ್ನ ನಿನ್ನೆ ಮಧ್ಯಾಹ್ನ ಲಿಂಗಸುಗೂರನಲ್ಲಿ ಕಾರಲ್ಲಿ ಬಲವಂತವಾಗಿ ಆರೋಪಿಗಳು ಕರೆದೊಯ್ದಿದ್ದರು. ಇದನ್ನು ತಡೆಯಲು ಯತ್ನಿಸಿದ ಜನರಿಗೆ ಪಿಸ್ತೂಲ್ ತೋರಿಸಿ ಪರಾರಿಯಾಗಿದ್ದರು.
ಘಟನೆ ನಡೆಯುತ್ತಿದ್ದಂತೆ ಎಎಸ್ಪಿ ಹರಿಬಾಬು ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಎಸ್ಪಿ ವೇದಮೂರ್ತಿ ಅವರ ತಂಡ ಪ್ರಕರಣವನ್ನು ಭೇದಿಸಿದೆ. ಅಪಹರಣಕಾರರು ಮತ್ತು ಅಪಹರಣಕ್ಕೆ ಒಳಗಾಗಿದ್ದ ಶರಣಪ್ಪನನ್ನ ತೋಟದ ಮನೆಯಲ್ಲಿ ಕಾವಲು ಕಾಯುತ್ತಿದ್ದ ಓರ್ವನ ಸೇರಿ ಐವರನ್ನು ಬಂಧಿಸಿ, ಶರಣಪ್ಪನನ್ನ ಸುರಕ್ಷಿತವಾಗಿ ರಾಯಚೂರಿಗೆ ಕರೆ ತರಲಾಗಿದೆ.
ಈ ಸಂಬಂಧ ಲಿಂಗಸುಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.