ಬೆಂಗಳೂರು: "ಸದ್ಯ ರೈಲ್ವೆ ಇಲಾಖೆಯಲ್ಲಿ 12 ಲಕ್ಷ ಉದ್ಯೋಗಿಗಳು ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಬಾರಿ ರೈಲ್ವೆ ಪರೀಕ್ಷೆಯನ್ನು ಮಾತೃಭಾಷೆ ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ" ಎಂದು ಕೇಂದ್ರ ರೈಲ್ವೆ ಮತ್ತು ಜಲ ಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯದಲ್ಲಿ ಆರತಿ ಮಸಾಲಾ ಸಂಸ್ಥೆ ಉದ್ಘಾಟಿಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ರೈಲ್ವೆಯಲ್ಲಿ ಕ್ರಾಂತಿಯನ್ನು ತರಲಾಗಿದೆ. 10 ವರ್ಷಗಳ ಹಿಂದೆ ರೈಲುಗಳಲ್ಲಿ ಪ್ರಯಾಣ ಮಾಡಲು ಸಾರ್ವಜನಿಕರು ಇಷ್ಟಪಡುತ್ತಿರಲ್ಲಿಲ. ಸ್ವಚ್ಛತೆ ಇಲ್ಲದೇ ಇಲಿ, ಹೆಗ್ಗಣಗಳ ಕಾಟವಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿಯಿಂದ ರೈಲ್ವೆ ಇಲಾಖೆಯಲ್ಲಿ ಮಹತ್ತರ ಬೆಳವಣಿಗೆಯಾಗಿದೆ. ಇಂದು ಹೈಟೆಕ್ ರೈಲುಗಳು ದೇಶಾದ್ಯಂತ ಸಂಚಾರ ಮಾಡುತ್ತಿವೆ" ಎಂದು ಹೇಳಿದರು.
"ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಎಂದು ಕರೆ ನೀಡಿದ ಪರಿಣಾಮ ಇಂದು ಎಲ್ಲ ಅಗತ್ಯ ವಸ್ತುಗಳು ಸ್ವದೇಶದಲ್ಲಿ ತಯಾರಾಗುತ್ತಿವೆ. ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬಿ ಜೀವನಕ್ಕೆ ಮುದ್ರಾ ಯೋಜನೆ, ಜನಧನ್ ಯೋಜನೆ ಸಹಕಾರಿಯಾಗಿದೆ. ಕೋಟ್ಯಂತರ ಮಹಿಳೆಯರು ಈ ಯೋಜನೆಯ ಲಾಭದಿಂದ ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕವಾಗಿ ಸಬಲರಾಗಿದ್ದಾರೆ" ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ರಾಜ್ಯ ಬಿಜೆಪಿ ಮುಖಂಡ ಡಾ.ಅರುಣ್ ಸೋಮಣ್ಣ, ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥ ಗೌಡ, ಮಹಿಳಾ ಅಧ್ಯಕ್ಷೆ ಮತ್ತು ಆರತಿ ಮಸಾಲಾ ಸಂಸ್ಥೆಯ ಮಾಲಕಿ ರತ್ನಮ್ಮ, ನಿಕಟಪೂರ್ವ ಬಿಬಿಎಂಪಿ ಸದಸ್ಯ ದಾಸೇಗೌಡ, ಬಿಜೆಪಿ ಮುಖಂಡರಾದ ಕ್ರಾಂತಿರಾಜು, ಡೊಡ್ಡವೀರಯ್ಯ, ಲೋಕನಾಥ್, ಲಕ್ಷ್ಮಣ ಗೌಡ, ಪರಮೇಶ್ ಮತ್ತು ಬಿಜೆಪಿ ಮಹಿಳಾ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹಿರಿಯ ಸಾಹಿತಿ ಹಂ.ಪಾ.ನಾಗರಾಜಯ್ಯರಿಂದ ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ ಘೋಷಣೆ - Mysuru Dasara 2024