ರಾಯಚೂರು: ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ತಾಲೂಕಿನ ಕೃಷ್ಣಾ ಗ್ರಾಮದ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ನಿತ್ಯ ಕನ್ನಡದ ಡಿಂಡಿಮ ಕೇಳಿ ಬರುತ್ತಿದೆ. ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕನ್ನಡ ಕಲಿಯಲು ಉತ್ಸುಕರಾಗಿರುವ ವಿದ್ಯಾರ್ಥಿಗಳು ಓದಲು ಮುಂದೆ ಬರುತ್ತಿದ್ದಾರೆ.
ಗಡಿ ಜಿಲ್ಲೆಗೆ ಹೊಂದಿಕೊಂಡಿರುವ ತೆಲಂಗಾಣದಲ್ಲಿ ಒಟ್ಟು 13 ಸರ್ಕಾರಿ ಕನ್ನಡ ಶಾಲೆಗಳು ಇಂದಿಗೂ ನಡೆಯುತ್ತಿವೆ. ಇದರಲ್ಲಿ ಪ್ರೌಢಶಾಲೆ-1, ಹಿರಿಯ ಪ್ರಾಥಮಿಕ ಶಾಲೆ-2, ಪ್ರಾಥಮಿಕ ಶಾಲೆಗಳು-10 ಇವೆ. 950ಕ್ಕೂ ವಿದ್ಯಾರ್ಥಿಗಳು ಕನ್ನಡವನ್ನು ವಿದ್ಯಾಬ್ಯಾಸ ಮಾಡುತ್ತಿದ್ದು, ಈ ಎಲ್ಲಾ ಶಾಲೆಗಳಲ್ಲಿ ಮಾತೃ ಭಾಷೆಯಾಗಿ ಕನ್ನಡವನ್ನ ಕಲಿಯುತ್ತಿದ್ದಾರೆ.
ಇಲ್ಲಿನ ವಿದ್ಯಾರ್ಥಿಗಳಿಗೆ ಕನ್ನಡದ ಪುಸಕ್ತಗಳನ್ನಷ್ಟೇ ಕನ್ನಡ ಪ್ರಾಧಿಕಾರದಿಂದ ಪ್ರತಿವರ್ಷವೂ ಪೂರೈಕೆ ಮಾಡಲಾಗುತ್ತದೆ. ಉಳಿದ ಎಲ್ಲಾ ಸೌಲಭ್ಯವನ್ನ ತೆಲಂಗಾಣ ಸರ್ಕಾರ ಪೂರೈಸುತ್ತಿದೆ. 1ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು, ಉತ್ತೀರ್ಣಗೊಂಡ ಬಳಿಕ ಉನ್ನತ ವಿದ್ಯಾಬ್ಯಾಸಕ್ಕೆ ರಾಜ್ಯಕ್ಕೆ ಪ್ರವೇಶಿಸಿದ್ರೆ, ಅವರಿಗೆ ಸರಿಯಾದ ಅವಕಾಶ ಸಿಗದೆ ಅತಂತ್ರಕ್ಕೆ ಸಿಲುಕುತ್ತಿದ್ದಾರೆ.
ಭಾರತದ ಯಾವುದೇ ರಾಜ್ಯದಲ್ಲಿ ಓದಿ ರಾಜ್ಯಕ್ಕೆ ಬರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನ ಉಚಿತವಾಗಿ ನೀಡಬೇಕೆಂದು ಸಿಎಂ ಬಿಎಸ್ವೈ ಆದೇಶಿಸಿ, ಗೆಜೆಟ್ ಹೊರಡಿಸಿದ್ದರೂ ಕೂಡ, ಎಸ್ಎಸ್ಎಲ್ಸಿ ವಿದ್ಯಾಬ್ಯಾಸ ಮುಗಿದ ಬಳಿಕ ಉನ್ನತ ಶಿಕ್ಷಣ ಕಲಿಕೆಗೆ ಅವಕಾಶ ಕಲ್ಪಿಸದ ಅಧಿಕಾರಿಗಳು ಆದೇಶವನ್ನ ಜಾರಿಗೊಳಿಸದೇ ವಿದ್ಯಾರ್ಥಿಗಳ ಕಲಿಕೆಯೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎನ್ನುತ್ತಾರೆ ಹೋರಾಟಗಾರರು.
ಸದ್ಯ ಗಡಿನಾಡಿನ ಭಾಗದಲ್ಲಿರುವ ಶಾಲೆಗಳ ಮಕ್ಕಳಿಗೆ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗೆ ಕರ್ನಾಟಕದಲ್ಲಿ 7 ವರ್ಷ ಕಡ್ಡಾಯವಾಗಿ ಓದಿರಬೇಕು. ತೆಲಂಗಾಣದಲ್ಲಿ ಜಾತಿ ಮತ್ತು ಆದಾಯ ಪತ್ರವನ್ನ ತಿರಸ್ಕಾರ ಮಾಡುತ್ತಿದ್ದಾರೆ. ಇದರಿಂದ ಗಡಿನಾಡಿಯಲ್ಲಿ ಓದುತ್ತಿದ್ದ ಮಕ್ಕಳಿಗೆ ಕರ್ನಾಟಕದಲ್ಲಿ ಪ್ರವೇಶ, ವಿದ್ಯಾರ್ಥಿ ವೇತನ, ವಸತಿ ಸೌಲಭ್ಯ, ಬಸ್ ಪಾಸ್ ಸೌಲಭ್ಯದಿಂದ ವಂಚಿತವಾಗುವಂತಾಗಿದೆ.
ಅಲ್ಲದೇ ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕಾಗಿ ಇರುವ ಸಿಇಟಿ ಪರೀಕ್ಷೆಯಿಂದಲೂ ಸಹ ವಂಚಿತರಾಗುತ್ತಿದ್ದಾರೆ. ಹೀಗಾಗಿ, 2011ರಲ್ಲಿ ಹೊರಡಿಸಿರುವ ಆದೇಶದಂತೆ ಗಡಿನಾಡಿನ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ಕಲ್ಪಿಸಬೇಕು. ಜೊತೆಗೆ 13 ಗ್ರಾಮಗಳನ್ನು ಗೆಜೆಟ್ಗೆ ಸೇರಿಸಬೇಕು ಎಂಬುದು ಕನ್ನಡ ಶಾಲೆಯ ಶಿಕ್ಷಕರು ಹಾಗೂ ಸಂಘಟಕರ ಒತ್ತಾಸೆಯಾಗಿದೆ.