ರಾಯಚೂರು : ಕೋವಿಡ್ ಸೋಂಕು ಇರುವವರ ರಕ್ಷಣೆಗೆಂದು ಹೆಚ್ಚಿನ ನಿಗಾವಹಿಸಲು ಹಾಗೂ ಅಗತ್ಯ ಚಿಕಿತ್ಸೆ ಕೊಡುವ ಉದ್ದೇಶದಿಂದ ಆರಂಭಿಸಿದ ಕೋವಿಡ್ ಕೇರ್ ಸೆಂಟರ್ ನಿರ್ವಹಣೆ ನಿರ್ಲಕ್ಷ್ಯದಿಂದ ರೋಗ ಹರಡುವ ತಾಣವಾಗಿದೆ ಎಂದು ಸೋಂಕಿತರು ಆರೋಪಿಸಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಕರಡಕಲ್ಲ ಹೊರವಲಯದಲ್ಲಿ ಆರಂಭಿಸಿದ ಕೋವಿಡ್ ಕೇರ್ ಸೆಂಟರ್ನಲ್ಲಿ ಶುದ್ಧ ಕುಡಿಯುವ ನೀರು, ಸ್ವಚ್ಛತೆ, ಅಗತ್ಯ ಸೌಲಭ್ಯಗಳ ಕೊರತೆ ತಾಂಡವವಾಡುತ್ತಿವೆ. ನಿತ್ಯ ಹೋಟೆಲ್ನಿಂದ ತರುವ ಊಟ-ಉಪಾಹಾರ ಕಳಪೆ ಆಗಿದೆ. ತಿನ್ನಲು ಯೋಗ್ಯವಾಗಿರುವುದಿಲ್ಲ ಎಂಬ ದೂರು ಕೇಳಿ ಬಂದಿವೆ. ಕೋವಿಡ್ ಕೇರ್ ಸೆಂಟರ್ನಲ್ಲಿ ಇದ್ದವರಿಗೆ ಕುಡಿಯಲು ಬಿಸಿ ನೀರು ಪೂರೈಸುತ್ತಿಲ್ಲ.
ಪ್ಲಾಸ್ಟಿಕ್ ಚೀಲದಲ್ಲಿ ತಂದು ಹಾಕುವ ಊಟ ಉಪಹಾರ ಪ್ಯಾಕೇಟ್ ಹಂಚುವವರಿಲ್ಲ. ತ್ಯಾಜ್ಯ ತೆಗೆಯದೆ ಬಿಟ್ಟಿದ್ದರಿಂದ ದುರ್ನಾತ ಬೀರುತ್ತಿದೆ. ಕೊಠಡಿ, ಆವರಣ ಕಸಬಳಿದು, ಸ್ಯಾನಿಟೈಸರ್ ಮಾಡುತ್ತಿಲ್ಲ. ಶೌಚಾಲಯ, ಸ್ನಾನಗೃಹಗಳ ಅವ್ಯವಸ್ಥೆ ಕೇಳಬಾರದು ಎಂದು ಹೆಸರು ಹೇಳಲಿಚ್ಛಿಸದ ಸೋಂಕಿತರು ಮಾಹಿತಿ ನೀಡಿದ್ದಾರೆ.
ಸೋಂಕಿತರೆಂದು ತಂದು ಹಾಕಿರುವ ನಮಗೆ ಮಾನಸಿಕ ಹಿಂಸೆ ಹೆಚ್ಚಾಗುತ್ತಿದೆ. ಕೆಲವರಿಗೆ ಭಯದಿಂದ ಕಾಲಹರಣ ಮಾಡುತ್ತಿದ್ದು ಸೋಂಕಿತರನ್ನು ಪ್ರೀತಿ, ವಿಶ್ವಾಸದಿಂದ ನೋಡಿಕೊಳ್ಳಲು ಮುಂದಾಗುತ್ತಿಲ್ಲ. ನಮ್ಮನ್ಬು ಅಸ್ಪೃಶ್ಯರಂತೆ ನೋಡಿಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆ ಬದಲಾಗದಿದ್ದರೆ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.