ರಾಯಚೂರು : ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಅನೇಕ ಬಾವಿಗಳು ತುಂಬಿವೆ. ಜವಾಹರನಗರ, ಎನ್ಜಿಒ ಕಾಲೋನಿ, ಮಾಣಿಕ್ಯ ಪ್ರಭುಲೇಔಟ್, ವಾಸವಿನಗರ, ರಾಘವೇಂದ್ರ ಮಠದ ಬಳಿ ಮನೆಗಳಲ್ಲಿ ಬಾವಿಗಳು ನೀರಿನಿಂದ ಭರ್ತಿಯಾಗಿವೆ. ಸುಮಾರು 30 ರಿಂದ 50 ಅಡಿವರೆಗೂ ಇರುವ ಬಾವಿಗಳು ಮಳೆಗಾಲದಲ್ಲಿ ಸ್ವಲ್ಪ ನೀರು ಬಂದು ಬಳಿಕ ಬೇಸಿಗೆ ವೇಳೆ ನೀರು ಖಾಲಿಯಾಗುತ್ತಿತ್ತು. ಆದರೆ, ಮಳೆಯಿಂದ ಬಾವಿಗಳು ತುಂಬಿ ತುಳುಕುತ್ತಿವೆ.
ಭಾರಿ ಮಳೆಗೆ ನಗರದ ಭಾಗಶಃ ಬಡಾವಣೆಗಳಲ್ಲಿ ನೀರು ನುಗ್ಗಿ ಜಲಾವೃತ್ತಗೊಂಡಿದ್ದವು. ತೆಗ್ಗು ಪ್ರದೇಶಗಳಲ್ಲಿ ಮಳೆ ನಿಂತಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಆದರೆ, ಮಳೆರಾಯ ಬಾವಿಗಳಿರುವ ಮನೆಗಳಿಗೆ ವರದಾನವಾಗಿದ್ದಾನೆ. ಎನ್ಜಿಒ ಕಾಲೋನಿ, ರಾಘವೇಂದ್ರ ಮಠದ ಬಳಿ, ಜವಾಹರನಗರ, ವಾಸವಿನಗರ ಭಾಗದಲ್ಲಿ ಬರುವ ನೂರಾರು ಮನೆಗಳ ಮುಂದಿನ ಬಾವಿಗಳು ತುಂಬಿ ತುಳುಕುತ್ತಿವೆ. ಹಲವು ವರ್ಷಗಳಿಂದ ಖಾಲಿಯಾಗಿದ್ದ ಬಾವಿಗಳೂ ಇದೀಗ ಮಳೆ ನೀರಿನಿಂದ ತುಂಬಿರುವುದು ಮನೆ ಮಾಲೀಕರಿಗೆ ಸಂತಸ ತಂದಿದೆ.
ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆ ಸುರಿದ್ರೆ ಬಾವಿಯೊಳಗೆ ನೀರು ಬರುತ್ತೆ. ಆದರೆ, ವಾಡಿಕೆಗಿಂತ ಮೀರಿ ಮಳೆ ಬಂದ್ರೂ, ಕೊಂಚ ಜಾಸ್ತಿ ಬಾವಿಯೊಳಗೆ ಜಲ ಮೂಲ ಹೆಚ್ಚುತ್ತದೆ. ಆದರೆ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಬಾವಿಯೊಳಗೆ ನೀರು ಭರ್ತಿಯಾಗುವುದಲ್ಲದೇ ಹೆಚ್ಚುವರಿ ನೀರು ಹರಿದು ಹೋಗಿದ್ದು, ಸರಿ ಸುಮಾರು 10 ವರ್ಷಗಳ ಬಳಿಕ ಇಂತಹ ಘಟನೆ ನಡೆದಿದೆ ಎಂದು ಜಿಯಾಲಾಜಿಸ್ಟ್ ಪ್ರಭುದೇವರ ಹೆಚ್ ಎಂ ಹೇಳುತ್ತಾರೆ.
ಸರ್ಕಾರ ಬೇಸಿಗೆ ಸಮಯದಲ್ಲಿ ನೀರಿಗಾಗಿ ಬೋರ್ವೆಲ್ ಕೊರೆಯುವ ಬದಲಿಗೆ ಬಡಾವಣೆಗಳಲ್ಲಿ ಬಾವಿಗಳನ್ನ ನಿರ್ಮಿಸಿ ಸುರಕ್ಷತಾ ಕ್ರಮ ಕೈಗೊಂಡ್ರೆ ಅಂತರ್ಜಲಕ್ಕೆ ಅನುಕೂಲವಾಗಲಿದೆ ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯ.