ರಾಯಚೂರು: ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ದೇಶದ ನಾಗರಿಕರನ್ನು ಧರ್ಮದ ಆಧಾರದಲ್ಲಿ ವಿಂಗಡಣೆ ಮಾಡಲು ಮುಂದಾಗಿದ್ದಾರೆ. ಈ ದೇಶದಲ್ಲಿ ಸಂವಿಧಾನ ಜಾರಿಗೆ ಬಂದಾಗ ಯಾರೆಲ್ಲ ಜನಿಸಿದ್ದರೋ ಅವರೆಲ್ಲರೂ ಈ ದೇಶದ ನಾಗರಿಕರೇ.. ಮತವನ್ನು ಕೇಳುವಾಗ ಭಾರತದ ನಾಗರಿಕನೇ ಎಂಬ ಪ್ರಶ್ನೆಯನ್ನು ಅವರು ಮಾಡಲಿಲ್ಲ. ಈಗ ಉದ್ಯೋಗ ಕೇಳಿದ್ರೆ, ನೀನು ಭಾರತೀಯನೇ ಎಂದು ಪ್ರಶ್ನಿಸುತ್ತಾರೆ. ಅವರು ಕುದುರೆ ಕಳ್ಳರು ಎಂದು ಎಂದು ವಿಚಾರವಾದಿ ಶಿವಶಂಕರ್ ವ್ಯಂಗ್ಯವಾಡಿದ್ದಾರೆ.
ದೇಶಾದ್ಯಂತ ಸಿಎಎ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗಿ ಭಾರಿ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಯಚೂರಿನಲ್ಲಿಯೂ ವಿವಿಧ ಸಂಘಟನೆಗಳ ಒಕ್ಕೂಟ 'ಸಂವಿಧಾನದ ಹಕ್ಕುಗಳಿಗಾಗಿ ನಾಗರಿಕರ ವೇದಿಕೆ'ಯ ನೇತೃತ್ವದಲ್ಲಿ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಆಯೋಜನೆಗೊಂಡಿದೆ.
ಸಮಾವೇಶದಲ್ಲಿ ವಿಚಾರವಾದಿ ಶಿವಶಂಕರ್ ಮಾತನಾಡಿ, ಮೋದಿ ಹಾಗೂ ಅಮಿತ್ ಶಾ ದೇಶದ ನಾಗರಿಕರನ್ನು ಧರ್ಮದ ಆಧಾರದಲ್ಲಿ ವಿಂಗಡಣೆಗೆ ಮುಂದಾಗಿದ್ದಾರೆ. ಈ ದೇಶದಲ್ಲಿ ಸಂವಿಧಾನ ಜಾರಿಗೆ ಬಂದಾಗ ಯಾರೆಲ್ಲ ಜನಿಸಿದ್ದರೋ ಅವರೆಲ್ಲರೂ ಈ ದೇಶದ ನಾಗರಿಕರೇ.. ಧರ್ಮಧಾರಿತವಾಗಿ ವಿಂಗಡನೆಯಾಗಿದ್ದು ಪಾಕಿಸ್ಥಾನವೇ ಹೊರತು ಭಾರತವಲ್ಲ ಎಂದ ಅವರು, ಮತವನ್ನು ಕೇಳುವಾಗ ಭಾರತದ ನಾಗರಿಕನೇ ಎಂಬ ಪ್ರಶ್ನೆಯನ್ನು ಮಾಡಲಿಲ್ಲ. ತೆರಿಗೆ ಕಟ್ಟುವಾಗ ನಾಗರಿಕತ್ವದ ಪ್ರಶ್ನೆ ಮಾಡಲಿಲ್ಲ, ಈಗ ಉದ್ಯೋಗ ಕೇಳಿದ್ರೆ, ನೀನು ಭಾರತೀಯನೇ ಎಂದು ಕುದುರೆ ಕಳ್ಳರು ಪಶ್ನಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ನಂತರದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ನಿಸಾರ್ ಅಹಮದ್ ಮಾತನಾಡಿ, ಸಿಎಎ ಕಾಯ್ದೆಯನ್ನು ನಾವೆಲ್ಲರೂ ಸೇರಿ ವಿರೋಧಿಸೋಣ. ನಾವು ಗಾಂಧೀಜಿ ಮಾರ್ಗದಲ್ಲಿ ಅಹಿಂಸಾ ಹೋರಾಟ ಮಾಡಬೇಕಿದೆ. ದೇಶದ ಸ್ವಾತಂತ್ರ್ಯದ ಹೋರಾಟದ ನಂತರದ ದೊಡ್ಡ ಹೋರಾಟ ಇದಾಗಿದೆ ಎಂದರು.