ರಾಯಚೂರು: ಬಸವರಾಜ ಬೊಮ್ಮಾಯಿಯವರು ಬುದ್ದಿವಂತ ಸಿಎಂ. ಅವರು ಸಮರ್ಥವಾಗಿ ಸರ್ಕಾರವನ್ನು ಮುನ್ನಡೆಸುವ ವಿಶ್ವಾಸವಿದೆ. ಖಾತೆ ಹಂಚಿಕೆಯ ಅಸಮಾಧಾನದ ವಿಷಯವನ್ನು ಅವರು ಸರಿಪಡಿಸಿಕೊಳ್ಳುತ್ತಾರೆ. ಒಂದು ವೇಳೆ ನಮ್ಮ ಅವಶ್ಯಕತೆ ಇದ್ದರೆ ನಾನು ಹೋಗಿ ಸಲಹೆ, ಸೂಚನೆಗಳನ್ನು ನೀಡುತ್ತೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನನಗೆ ನೀಡಿದ ಖಾತೆಯ ಬಗ್ಗೆ ತೃಪ್ತಿ ಇದೆ. ನಾನು ಬಂಧಿಖಾನೆ ಸಚಿವನಾಗಿ ಮೊದಲು ಮಂತ್ರಿಯಾದೆ. ಬಳಿಕ ಪ್ರೊಮೋಷನ್ ಆಗಿ ಬೆಂಗಳೂರು ನಗರಾಭಿವೃದ್ಧಿ, ಆ ಮೇಲೆ ರಾಜ್ಯದ ಸಾರ್ವಜನಿಕ ಕುಂದುಕೊರತೆಗೆ ಸಚಿವನಾಗಿದ್ದೆ. ಹಾಗಾಗಿ, ಸೋಮಣ್ಣ ನಿಂತ ನೀರಲ್ಲ, ಹರಿಯುವ ನೀರು ಇದ್ದ ಹಾಗೆ. ನಾನು ಎಲ್ಲೇ ಇದ್ರೂ ನನ್ನ ಸ್ಟೈಲ್ನಲ್ಲೇ ಕೆಲಸ ಮಾಡುತ್ತೇನೆ, ನನಗೆ ಬೇರೆ ಯಾವುದೇ ಆಸೆಗಳಿಲ್ಲ ಎಂದರು.
ಇಂದು ನೆರೆ ಪೀಡಿತ ಪ್ರದೇಶಗಳಿಗೆ ಪ್ರವಾಸ ಮಾಡಬೇಕಿತ್ತು. ಆದ್ರೆ ಭೇಟಿ ರದ್ದು ಮಾಡಲಾಗಿದೆ. ಈ ವಿಚಾರಕ್ಕೆ ಉತ್ತರಿಸುತ್ತಾ, ನನ್ನ ಇತಿಮಿತಿಯಲ್ಲಿ ಒಂದು ಗಂಟೆಯಲ್ಲಿ ಎಲ್ಲವೂ ಮಾಡಲು ಆಗಲ್ಲ ಎಂದು ಭಾವಿಸಿದ್ದಾನೆ ಎಂದು ಹೇಳಿದರು.
ಆಗಸ್ಟ್ 15ರಿಂದ 19ರ ಐದು ದಿನಗಳ ಕಾಲ ರಾಯಚೂರಿನಲ್ಲಿರುವೆ. ಐದು ದಿನಗಳಲ್ಲಿ 7 ತಾಲೂಕಿನಲ್ಲಿ ಓಡಾಟ ಮಾಡುತ್ತೇನೆ. ಜಿಲ್ಲೆಯ ಅಧಿಕಾರಿಗಳಲ್ಲಿ ಜಡತ್ವ ಇದೆ. ನಾನು ಪ್ರವಾಹಪೀಡಿತ ಪ್ರದೇಶಗಳಲ್ಲಿ ಎರಡು-ಮೂರು ಗಂಟೆಗಳ ಕಾಲ ಸುತ್ತಾಟ ಮಾಡುತ್ತಿದ್ದೇನೆ. ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಮೈಸೂರು ಭೂ ಹಗರಣ: ಶಾಸಕ ರಾಮ್ದಾಸ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರ್ಟ್ ಸೂಚನೆ