ಹುಬ್ಬಳ್ಳಿ: ತಾವು ದುಡಿದ ದುಡಿಮೆಯಲ್ಲಿಯೇ ಅನ್ನದಾನ ಮಾಡುವ ಮೂಲಕ ನಗರದ ರಾಜೇಶ್ವರಿ ಹಾಗೂ ಮಂಜುನಾಥ ಎಂಬ ದಂಪತಿ ಇತರರಿಗೂ ಮಾದರಿಯಾಗಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿ, ಬಡತನದ ನೋವು ಏನೆಂದು ತಿಳಿದಿರುವ ಇವರು, ನೊಂದವರ ಧ್ವನಿಯಾಗಿ ಸದ್ದಿಲ್ಲದೇ ಸಮಾಜಸೇವಕರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ವಿಶೇಷ.
ಮೂಲತಃ ಕುಂದಗೋಳ ನಿವಾಸಿಯಾಗಿರುವ ಈ ದಂಪತಿ ಆರ್.ಎಂ.ಲೋಹಿಯಾ ನಗರದಲ್ಲಿ ಸದ್ಯ ವಾಸವಿದ್ದು, ಉಪ ಜೀವನಕ್ಕೆ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಾರೆ. ಇವರ ಬಳಿಯಲ್ಲಿ ಕಷ್ಟ ಹೇಳಿಕೊಂಡು ಬರುವವರಿಗೆ ಸಹಾಯ ಮಾಡುವುದು ಈ ದಂಪತಿಯ ನಿತ್ಯದ ಕಾಯಕ.
![Hubballi: Poor couple became role model by providing free meals](https://etvbharatimages.akamaized.net/etvbharat/prod-images/13-02-2025/kn-hbl-01-anna-dasoha-family-pkg-7208089_12022025163952_1202f_1739358592_104.jpg)
ಮಂಜುನಾಥ ಬಾಡಿಗೆ ವಾಹನದ ಚಾಲಕರಾಗಿದ್ದು, ಬಂದ ಹಣದಲ್ಲಿ ನೊಂದವರ, ಬಡವರ, ಶೋಷಿತರ ಹಿತಾಭಿವೃದ್ಧಿಗೆ ಬಳಸುತ್ತಿದ್ದಾರೆ. ಮಾಜಿ ದೇವದಾಸಿಯರ ಪುನರ್ವಸತಿಗೆ ಸಹಾಯ ಮಾಡುವುದು, ಅವರಿಗೆ ಬೇಕಾದ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ಹಲವು ಸಮಾಜಮುಖಿ ಸೇವೆಗಳನ್ನು ಮಾಡುವ ಈ ದಂಪತಿ, ಇದುವರೆಗೆ ಅಂದಾಜು ಎರಡು ಸಾವಿರಕ್ಕೂ ಹೆಚ್ಚು ಜನರಿಗೆ ಪಿಂಚಣಿ ಸೇರಿದಂತೆ ಇತರ ಸರ್ಕಾರಿ ಯೋಜನೆಗಳನ್ನು ಮಾಡಿಸಿಕೊಟ್ಟಿದ್ದಾರೆ.
ಅಂಧ, ಅನಾಥ ಮಕ್ಕಳಿಗೆ ಅನ್ನದಾಸೋಹ: ಇದಲ್ಲದೇ ಅಡುಗೆ ಕೆಲಸದಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ತೆಗೆದಿಟ್ಟು ವಾರದಲ್ಲಿ ಎರಡು ಸಲ ಜಿಲ್ಲೆಯಲ್ಲಿರುವ ಅಂಧ ಮತ್ತು ಅನಾಥ ಮಕ್ಕಳಿಗೆ ಉಚಿತವಾಗಿ ಅನ್ನದಾಸೋಹ ಸಹ ಮಾಡುತ್ತಿದ್ದಾರೆ. ಎಷ್ಟೇ ಕಷ್ಟಗಳು ಎದುರಾದರೂ ಛಲ ಬಿಡದೇ ನಡೆಸಿಕೊಂಡು ಬರುತ್ತಿರುವುದು ಅವರ ಸಮಾಜ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.
![Hubballi: Poor couple became role model by providing free meals](https://etvbharatimages.akamaized.net/etvbharat/prod-images/13-02-2025/kn-hbl-01-anna-dasoha-family-pkg-7208089_12022025163952_1202f_1739358592_486.jpg)
ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜನನಿಬಿಡ ಪ್ರದೇಶಗಳಲ್ಲಿ ಹಸಿವಿನಿಂದ ಬಳಲುತ್ತಿರುವವರನ್ನು ಹುಡುಕಿಕೊಂಡು ಹೋಗಿ ಅವರಿಗೆ ಅನ್ನ, ಬಟ್ಟೆ ನೀಡಿ ಅವರನ್ನು ಸಂತೈಸುತ್ತಾರೆ. ಇಂತಹ ಹಲವು ಸಮಾಜ ಸೇವೆಗಳನ್ನು ಮಾಡುವ ಮೂಲಕ ಈ ದಂಪತಿ ಇತರರಿಗೂ ಮಾದರಿಯಾಗಿದ್ದಾರೆ ಅಂದರೆ ತಪ್ಪಾಗಲಾರದು.
ಈ ಬಗ್ಗೆ ದಂಪತಿ ಹೇಳುವುದಿಷ್ಟು: ಈ ಕುರಿತು ರಾಜೇಶ್ವರಿ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ್ದು, ಕಳೆದ 10 ವರ್ಷಗಳಿಂದ ಅನ್ನದಾನ ಸೇವೆ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಕುಟುಂಬದಲ್ಲಿ ತಲಾತಲಾಂತರದಿಂದ ಬಂದ ಪ್ರವೃತಿ ಇದು. ಈ ಹಿಂದೆ ನಮ್ಮ ಅತ್ತೆ, ಮಾವ ಅವರು ಕೂಡ ಅನ್ನದಾನ ಮಾಡಿಕೊಂಡು ಬರುತ್ತಿದ್ದರು. ಈಗ ಅತ್ತೆಯವರು ತೀರಿಕೊಂಡ ಮೇಲೆ ಅವರ ವೃತ್ತಿಯನ್ನು ಮುಂದುವರೆಸಿದ್ದೇವೆ. ಈ ದಾಸೋಹ ಸೇವೆಯನ್ನು ಆಟೋ ನಿಲ್ದಾಣ, ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಮಾಡುತ್ತೇವೆ. ಇದು ನಮ್ಮ ಸ್ವಂತ ಖರ್ಚಿನಲ್ಲಿಯೇ ಮಾಡುತ್ತೇವೆ. ಲಲಿತಾ ಕೆಟರ್ಸ್ ಎಂಬ ಕೆಟರಿಂಗ್ ನಡೆಸುತ್ತೇವೆ. ಅದರಿಂದ ಬಂದ ಅಲ್ಪ ಲಾಭದಲ್ಲಿ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದರು.
![Hubballi: Poor couple became role model by providing free meals](https://etvbharatimages.akamaized.net/etvbharat/prod-images/13-02-2025/kn-hbl-01-anna-dasoha-family-pkg-7208089_12022025163952_1202f_1739358592_56.jpg)
ನಮ್ಮ ಕೈಲಾದಷ್ಟು ಬಡ ಶಾಲಾ ಮಕ್ಕಳಿಗೆ ಬುಕ್, ಬ್ಯಾಗ್ ನೀಡುತ್ತಾ ಬಂದಿದ್ದೇವೆ. ಬಡವರಿಗೆ ಬಟ್ಟೆ, ಬೆಡ್ಸೀಟ್, ರಗ್ಗು ದಾನ ಮಾಡುವುದು ಸೇರಿದಂತೆ ದೇವರು ನಮಗೆ ಎಷ್ಟು ದಾನ - ಧರ್ಮ ಮಾಡುವ ಅವಕಾಶ ಕೊಟ್ಟಿದ್ದಾನೋ ಅಷ್ಟು ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ಮೂವರು ಮಕ್ಕಳನಲ್ಲಿ ಓರ್ವ ಮಗ ಬುದ್ಧಿಮಾಂಧ್ಯನಾಗಿದ್ದು, ಅವನ ಸೇವೆ ಮಾಡುವದರ ಜೊತೆಗೆ ಈ ಸಮಾಜ ಸೇವೆ ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದು ರಾಜೇಶ್ವರಿ ತಮ್ಮ ಸೇವಾ ವೃತ್ತಿ ಬಗ್ಗೆ ವಿವರಣೆ ನೀಡಿದರು.
ಹಿರಿಯರ ಸಂಪ್ರದಾಯ ಮುಂದುವರಿಸಿದ್ದೇವೆ: ನಮ್ಮ ಹಿರಿಯರೆಲ್ಲ ಅನ್ನದಾಸೋಹ ಮಾಡುತ್ತಿದ್ದರು. ಅವರಿಂದ ಬಳುವಳಿಯಾಗಿ ಬಂದಂತದನ್ನು ನನ್ನ ಹೆಂಡತಿ ಮುಂದುವರೆಸಿಕೊಂಡು ಹೋಗುತ್ತಿದ್ದಾಳೆ. ಕಳೆದ 10 ವರ್ಷಗಳಿಂದ ಈ ಸೇವೆ ನಡೆಯುತ್ತಿದೆ. ಈ ಮೊದಲು ಮಠಗಳಿಗೆ ಮಾತ್ರ ದಾನ ಮಾಡಲಾಗುತ್ತಿತ್ತು. ತನ್ನ ಪತ್ನಿ ತಾವು ದುಡಿದ ದುಡ್ಡನ್ನು ಸಮಾಜಕ್ಕೆ ಏನಾದ್ರು ಕೊಡಬೇಕೆಂಬ ಇಚ್ಛಾಶಕ್ತಿಯಿಂದ ವಾರದಲ್ಲಿ ಎರಡು ದಿನ ಆಟೋ ಸ್ಟ್ಯಾಂಡ್, ಬಸ್ ಸ್ಟ್ಯಾಂಡ್, ರೈಲು ನಿಲ್ದಾಣ ಸೇರಿದಂತೆ ಜನದಟ್ಟಣೆ ಇರುವ ಕಡೆ ಐದು ಕೆಜಿ ಪಲಾವ್, ಐದು ಕೆಜಿ ಶೀರಾ, ಐದು ಕೆಜಿ ಅನ್ನ-ಸಾಂಬಾರು, ಐದು ಕೆಜಿ ಸಜ್ಜಕ ಮಾಡಿಕೊಂಡು ಹೋಗಿ ದಾಸೋಹ ಮಾಡುತ್ತೇವೆ. ಉಳಿದರೆ ಮನೆಗೆ ತಗೆದುಕೊಂಡು ಬರುತ್ತೇವೆ. ಇಲ್ಲವಾದರೆ ಎಲ್ಲ ದಾನ ಮಾಡಿಕೊಂಡು ಮನೆಗೆ ಹೋಗಿ ಮತ್ತೆ ಅಡುಗೆ ಮಾಡಿ ಊಟ ಮಾಡುತ್ತೇವೆ ಎಂದು ಮಂಜುನಾಥ ತಮ್ಮ ಸಮಾಜ ಸೇವೆಯ ಬಗ್ಗೆ ತಿಳಿಸಿದರು.
ಮಗ ಬುದ್ಧಿಮಾಂಧ್ಯ ಇದ್ದು ಅವನ ಪ್ರೇರಣೆಯಿಂದ ಇದನ್ನು ಮುಂದುವರೆಸಿದ್ದೇವೆ. ಇದರ ಜೊತೆಗೆ ನಮ್ಮ ಪೂರ್ವಜರು ರಕ್ತಗತವಾಗಿ ಬಂದಿರುವ ಕಾಯಕವಾಗಿರುವದರಿಂದ ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಎಂದು ಮಂಜುನಾಥ ಹೇಳಿಕೊಂಡರು.
ಇದನ್ನೂ ಓದಿ: 35 ವರ್ಷದ ಉಳಿತಾಯದ ಹಣವನ್ನು ಶಿಕ್ಷಣ ಸಂಸ್ಥೆಗೆ ದಾನ ಮಾಡಿದ ಮಹಿಳೆ - WOMAN DONATES 35 YEARS OF SAVINGS