ರಾಯಚೂರು: ಕೃಷ್ಣಾ ನದಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರಿನಿಂದ ರಾಯಚೂರು ಜಿಲ್ಲೆಯಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಮುಂಜಾಗೃತೆಗಾಗಿ ಎನ್ಡಿಆರ್ಎಫ್ನ ರಕ್ಷಣಾ ತಂಡ ಜಿಲ್ಲೆಗೆ ಆಗಮಿಸಿದೆ.
25 ಜನರನ್ನೊಳಗೊಂಡ ಈ ತಂಡ ಜನರನ್ನು ರಕ್ಷಿಸಲು ಎಲ್ಲಾ ಸಿದ್ಧತೆಗಳನನ್ನು ಮಾಡಿಕೊಂಡಿದೆ. 25 ಜನರ ಈ ತಂಡ ಪುನಃ ಎರಡು ಗುಂಪುಗಳಾಗಿ, ಒಂದು ಗುಂಪು ಲಿಂಗಸೂಗೂರು ತಾಲೂಕು, ಇನ್ನೊಂದು ಗುಂಪು ರಾಯಚೂರು ತಾಲೂಕಿನಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಯಾವ ಕಡೆ ಹೆಚ್ಚಿನ ರಕ್ಷಣೆ ಅಗತ್ಯವಿದೆಯೋ ಅಲ್ಲಿ ಈ ತಂಡ ಕಾರ್ಯಾಚರಣೆ ನಡೆಸಲಿದೆ.
ಸದ್ಯ ನಾರಾಯರಣಪುರ ಜಲಾಶಯದಿಂದ 2.55 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಟ್ಟಿದ್ದು, ಶೀಲಹಳ್ಳಿ ಬ್ರಿಡ್ಜ್ ಮುಳಗಡೆಗೊಂಡಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಹಾಗೂ ಯರಗೋಡಿ ಬ್ರಿಡ್ಜ್ ಬಳಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ.
ಇನ್ನು ಜಿಲ್ಲಾಡಳಿತ ಪ್ರವಾಹ ಎದುರಿಸುವ ನಿಟ್ಟಿನಲ್ಲಿ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದು, ಈಗಾಗಲೇ ನಡುಗಡ್ಡೆ ಪ್ರದೇಶ ನಿವಾಸಿಗಳಿಗೆ ಆಹಾರ ಧಾನ್ಯಗಳನ್ನು ಒದಗಿಸಲಾಗಿದೆ. ಮತ್ತು ಪ್ರವಾಹ ಹಿನ್ನೆಲೆಯಲ್ಲಿ ರಾಯಚೂರು ಕೃಷ್ಣಾ ನದಿ ತೀರದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.