ವಿಜಯನಗರ: ಹೊಸಪೇಟೆಯ ತಾಲೂಕಿನ ರಾಣಿಪೇಟೆಯಲ್ಲಿ 2021ರ ಅಕ್ಟೋಬರ್ 22ರಂದು ಮಹಿಳೆಯೊಬ್ಬರನ್ನು ಹತ್ಯೆಗೈದು, ಆಕೆಯ ತಂಗಿಯನ್ನು ಗಾಯಗೊಳಿಸಿ 8 ಲಕ್ಷ ರೂ ಮೌಲ್ಯದ 270 ಗ್ರಾಂ ಚಿನ್ನಾಭರಣ ಹಾಗೂ 10 ಸಾವಿರ ನಗದು ದೋಚಿದ್ದ ಇಬ್ಬರು ಮಹಿಳೆಯರು ಸೇರಿ ಒಟ್ಟು 7 ಅಪರಾಧಿಗಳಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಇಂದು ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಅಪರಾಧಿಗಳಾದ ಕೃಷ್ಣ ದೇವೇಂದ್ರ ತಡಸದ, ನೌಷದ್ ಅಲಿ, ತೈಬಜುಲ್ಲಾ, ನಾಗರಾಜ, ಬೀರೇಶ, ಗೀತಾ ರಂಗಣ್ಣನವರ, ಪ್ರಮೀಳಾ ಜಿ.ಎಲ್, ಮಾಲತೇಶಪ್ಪ ಮತ್ತು ಮಾರುತಿ ಎಂಬವರಿಗೆ ನ್ಯಾಯಾಧೀಶ ಅಬ್ದುಲ್ ರಹಿಮಾನ್ ಎ.ನಂದಗಡಿ ಅವರು ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ಅಪರಾಧಿಗಳು 3.15 ಲಕ್ಷ ರೂ ದಂಡ ಪಾವತಿಸಬೇಕು, ವಿಫಲವಾದಲ್ಲಿ ಮತ್ತೆ ಆರು ತಿಂಗಳು ಸಾದಾ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿದರು.
ಘಟನೆಯ ಹಿನ್ನೆಲೆ: ಬಟ್ಟೆ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಕುಮಾರಿ ಎ.ವಿ.ಶಿವಭೂಷಣ ಮತ್ತು ಅವರ ಅಕ್ಕ ಭುವನೇಶ್ವರಿ ಇಬ್ಬರೂ ಅವಿವಾಹಿತರಾಗಿ ವಾಸಿಸುತ್ತಿದ್ದರು. ಇವರ ಬಳಿ ಅಪಾರ ಹಣ, ಚಿನ್ನಾಭರಣ ಇರಬಹುದೆಂದು ಭಾವಿಸಿದ್ದ ಅಪರಾಧಿಗಳು ಹಣ, ಒಡವೆ ದೋಚುವ ಸಂಚು ಹೂಡಿದ್ದರು. 2021ರ ಅ.22ರಂದು ಸಂಜೆ 5.30ರಿಂದ 7ರ ನಡುವೆ ಮನೆಗೆ ಬಟ್ಟೆ ಖರೀದಿ ನೆಪದಲ್ಲಿ ಬಂದಿದ್ದಾರೆ. ಹೀಗೆ ಬಂದವರು ಇಬ್ಬರ ಬಾಯಿಗೂ ಬಟ್ಟೆ ತುರುಕಿ ಭುವನೇಶ್ವರಿ ಅವರನ್ನು ಕೊಲೆ ಮಾಡಿದ್ದರು. ಶಿವಭೂಷಣ ಅವರ ಕೊಲೆಗೆ ಯತ್ನಿಸಿ ಚಿನ್ನ, ನಗದು ದೋಚಿ ಪರಾರಿಯಾಗಿದ್ದರು.
ಶಿವಭೂಷಣ ಅವರು ನೀಡಿದ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ ಅಂದಿನ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್ ರಾವ್ ಎಫ್ಐಆರ್ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ 6 ಮಂದಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಬಳಿಕ ಇನ್ಸ್ಪೆಕ್ಟರ್ ಬಾಳನಗೌಡ ಎಸ್.ಎಂ. ಅವರು ತಲೆಮರೆಸಿಕೊಂಡಿದ್ದ ಎ-1 ಅಪರಾಧಿ ಕೃಷ್ಣ ದೇವೇಂದ್ರಪ್ಪ ತಡಸದನನ್ನು ಬಂಧಿಸಿ, ಆತನಿಂದ ಚಿನ್ನಾಭರಣ ಜಪ್ತಿ ಮಾಡಿ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪೊಲೀಸ್ ಸಿಬ್ಬಂದಿ ಶಿವು ನಾಯ್ಕ ಮತ್ತು ಪರಶುರಾಮ ಅವರು ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಸರಿಯಾದ ಸಮಯಕ್ಕೆ ಹಾಜರುಪಡಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ವಕೀಲ ಟಿ.ಅಂಬಣ್ಣ ವಾದ ಮಂಡಿಸಿದ್ದರು.
ಇದನ್ನೂ ಓದಿ: ಜೆ ಜೆ ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರು ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಕಟ
ಇದನ್ನೂ ಓದಿ: ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆಯೆಂದು ಬಿಂಬಿಸಿದ ಪತಿಗೆ ಜೀವಾವಧಿ ಶಿಕ್ಷೆ