ರಾಯಚೂರು: ಕಟ್ಟಡ ನಿರ್ಮಾಣ ಹಾಗೂ ಇತರೆ ಕಾರ್ಮಿಕರಿಗೆ ನೀಡಲು ಸರ್ಕಾರದಿಂದ ಆಹಾರ ಧ್ಯಾನಗಳ ಕಿಟ್ ಆಗಮಿಸಿದ್ದು, ಕಾರ್ಮಿಕ ಇಲಾಖೆ ಅಧಿಕಾರಿಗಳ ಗೊಂದಲದ ಹೇಳಿಕೆಯಿಂದ ಅರ್ಹ ಫಲಾನುಭವಿಗಳು ಕಿಟ್ ಪಡೆಯಲು ಪರದಾಡಿರುವ ಘಟನೆ ನಡೆದಿದೆ.
ನಗರದ ಎಪಿಎಂಸಿ ಆವರಣದಲ್ಲಿ ಇರುವ ರೈತ ಭವನದಲ್ಲಿ ಆಹಾರ ಧಾನ್ಯಗಳ ಕಿಟ್ಗಳನ್ನು ಕಾರ್ಮಿಕ ಇಲಾಖೆ ಸಂಗ್ರಹಿಸಿದೆ. ಕಟ್ಟಡ ನಿರ್ಮಾಣ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಕಿಟ್ ಬಂದಿದ್ದು, ಅಧಿಕಾರಿಗಳು ಮಾತ್ರ ಕೆಲ ಜನರಿಗೆ ಕಿಟ್ ವಿತರಿಸಿ ಉಳಿದ ಕಿಟ್ಗಳನ್ನು ಗೋದಾಮಿನಲ್ಲಿ ಸಂಗ್ರಹಿ ಇಟ್ಟಿದ್ದಾರೆ. ಕಾರ್ಮಿಕರಿಗೆ ಹಂಚಿಕೆ ಮಾಡದೆ ಕೀಲಿ ಹಾಕಿಕೊಂಡು ಯಾವುದೇ ಸ್ಪಷ್ಟತೆ ನೀಡದೆ ಹೋಗಿದ್ದು, ಕಿಟ್ ಪಡೆಯಲು ಆಗಮಿಸಿದ ಕಾರ್ಮಿಕರು ಪರದಾಡುವಂತಾಯಿತು.
ಕಳೆದ ಎರಡು ದಿನಗಳ ಹಿಂದೆಯೇ ಕಿಟ್ಗಳು ಆಗಮಿಸಿದ್ದು, ಅಧಿಕಾರಿಗಳು ಕೆಲ ಕಾರ್ಮಿಕರಿಗೆ ಮಾತ್ರ ವಿತರಿಸಿ, ಇಂದು ವಿತರಿಸುವುದಾಗಿ ಹೇಳಿದ ಹಿನ್ನೆಲೆ ಬೆಳಗ್ಗೆ ಕೆಲಸ ಕಾರ್ಯಗಳನ್ನು ಬಿಟ್ಟು ಆಹಾರದ ಕಿಟ್ ಪಡೆಯಲು ನೂರಾರು ಕಾರ್ಮಿಕರು ರೈತ ಭವನದಲ್ಲಿ ಜಮಾಯಿಸಿದ್ದರು. ಆದರೆ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಕಿಟ್ ವಿತರಿಸದ ಹಿನ್ನೆಲೆ ಗೊಂದಲಕ್ಕೆ ಕಾರಣವಾಯಿತು. ಕಾರ್ಮಿಕರು ಕಳೆದ ಎರಡು ದಿನಗಳಿಂದ ಧಾನ್ಯಗಳ ಕಿಟ್ ಪಡೆಯಲು ಕೆಲಸಕ್ಕೂ ತೆರಳದೆ ಆಗಮಿಸುತ್ತಿದ್ದು, ಅಧಿಕಾರಿಗಳು ಮಾತ್ರ ಯಾವುದೇ ರೀತಿಯ ಸ್ಪಷ್ಟತೆ ನೀಡದೆ ಇರುವುದರಿಂದ ಕಾರ್ಮಿಕರಿಗೆ ಏನು ಮಾಡಬೇಕು ಎಂದು ತಿಳಿಯದಂತಾಗಿ ಆ ಸ್ಥಳದಲ್ಲಿ ಅಧಿಕಾರಿಗಳ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದರು.
ಕಟ್ಟಡ ಕಾರ್ಮಿಕರಾದ ಹುಲಿಗೆಮ್ಮ, ನರಸಮ್ಮ ಮಾತನಾಡಿ, ಸರ್ಕಾರದಿಂದ ಆಹಾರ ಧಾನ್ಯಗಳ ಕಿಟ್ ಬಂದಿರುವುದಾಗಿ ತಿಳಿದು ಕಳೆದ ಎರಡು ದಿನಗಳಿಂದ ಕೆಲಸಕ್ಕೆ ಹೋಗದೆ ಆಗಮಿಸಿದ್ದೇವೆ. ಅಧಿಕಾರಿಗಳು ಮಾತ್ರ ಕಿಟ್ ವಿತರಿಸಿದೆ ಕೀಲಿ ಹಾಕಿಕೊಂಡು ಹೋಗಿದ್ದಾರೆ. ಪ್ರತಿದಿನ ಕೆಲಸ ಮಾಡಿದರೆ ಮಾತ್ರ ನಮ್ಮ ಜೀವನ ನಡೆಯುವುದು. ಅಧಿಕಾರಿಗಳ ಈ ವರ್ತನೆಯಿಂದ ಉಪವಾಸ ಮಾಡುವಂತಾಗಿದ್ದು, ಬಂದಿರುವ ಕಿಟ್ ವಿತರಿಸಲು ಮುಂದಾಗಬೇಕು. ಕೋವಿಡ್ ಸಮಯದಲ್ಲಿ ಸರ್ಕಾರದಿಂದ ಘೋಷಿಸಲಾದ ಪರಿಹಾರ ಮೊತ್ತ ವಿತರಣೆಯಲ್ಲಿ ಕೆಲವರಿಗೆ ಮಾತ್ರ ದುಡ್ಡು ಬಂದಿದ್ದು, ಈ ಕುರಿತು ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.