ರಾಯಚೂರು: ಕೋವಿಡ್-19 ಸಾಂಕ್ರಾಮಿಕ ರೋಗ ಹರಡವಿಕೆಯನ್ನ ತಡೆಗಟ್ಟಲು ಸರಕಾರ ನಿಯಮಗಳನ್ನು ರೂಪಿಸಿದ್ದು, ಅದನ್ನ ಪಾಲಿಸುವುದು ಕಡ್ಡಾಯವಾಗಿದೆ.
ಆದರೆ, ನಿಯಮ ಮೀರಿ ವ್ಯಾಪಾರ ವಹಿವಾಟು ನಡೆಸುತ್ತಿರುವ ರಾಯಚೂರು ಜಿಲ್ಲೆಯ ವ್ಯಾಪಾರಸ್ಥರ ವಿರುದ್ದ ಜಿಲ್ಲಾ ಪೊಲೀಸ್ ಇಲಾಖೆ ಪ್ರಕರಣವನ್ನ ದಾಖಲಿಸುತ್ತಿದೆ.
ಗುಂಪಾಗಿ ಸೇರಿದ ಜನರು, ಮಾಸ್ಕ್ ಧರಿಸದವರು, ಸಾಮಾಜಿಕ ಅಂತರವನ್ನ ಕಾಯ್ದುಕೊಳದೇ ಇರುವವರು, ಸ್ಯಾನಿಟೈಸರ್ ಉಪಯೋಗಿಸದೇ ವ್ಯಾಪಾರ ವಹಿವಾಟು ನಡೆಸುತ್ತಿರುವ ಬೇಕರಿ, ಹೋಟೆಲ್, ಟೀ ಅಂಗಡಿ, ಕಿರಾಣಿ ಅಂಗಡಿ, ಬಟ್ಟೆ ಅಂಗಡಿಗಳ ವಿರುದ್ದ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ.

ಇದುವರೆಗೆ 26 ಅಂಗಡಿ ಮಾಲೀಕರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಬೈಕ್ ಸವಾರರು ಹಾಗೂ ಮಾಸ್ಕ್ ಇಲ್ಲದೇ ಓಡಾಡುತ್ತಿರುವವರ ವಿರುದ್ದ ದಂಡ ವಿಧಿಸಿ, ಮಾಸ್ಕ್ ವಿತರಣೆ ಮಾಡಿ, ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನ ಮಾಡಲಾಗುತ್ತಿದೆ.